ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ರೋಗಗ್ರಸ್ತ ಹಾಗೂ ಪಿಕ್ ಪಾಕೆಟ್ ಬಜೆಟ್ ಅನ್ನು ನಾನು ಕಂಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯ ಬಜೆಟ್ ಕೊಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.
ಎಲ್ಲ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಇಂದು ಮಂಡಿಸಿದೆ.
ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಕಿಂಚಿತ್ತಾದರೂ ಸ್ವಾರ್ಥ ಪ್ರದರ್ಶಿಸಿ ರಾಜ್ಯದ ಬಗ್ಗೆ ಯೋಚಿಸುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆ ನಿರೀಕ್ಷೆ ಸುಳ್ಳಾಗಿದೆ. ಇದು ಕೇಂದ್ರ ಬಜೆಟ್ ಅಲ್ಲ. ಕೋವಿಡ್ ಬಜೆಟ್. ಕೋವಿಡ್ ನಿಂದ ಜನ, ಸಮಾಜ, ಎಲ್ಲ ವರ್ಗದ ಜನ ಹೇಗೆ ನರಳಿದ್ದರೋ ಅದೇರೀತಿ ಈ ಬಜೆಟ್ ನಿಂದ ಕೂಡ ಎಲ್ಲ ವರ್ಗದ ಜನ ನರಳುವಂತಾಗಿದೆ.
ಕ್ರಿಪ್ಟೋ ಕರೆನ್ಸಿ ಕಾನೂನಾತ್ಮಕಗೊಳಿಸಿ ಶೇ.30 ರಷ್ಟು ತೆರಿಗೆ ವಿಧಿಸಿದ್ದಾರೆ. ನರೇಗಾ ಯೋಜನೆಗೆ ಅನುದಾನ ಕಡಿಮೆ ಮಾಡಿದ್ದಾರೆ. ಇನ್ನು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದವರು, ವರ್ಷಕ್ಕೆ 60 ಲಕ್ಷ ಉದ್ಯೋಗ ಕೊಡುತ್ತೇವೆ ಎಂದಿದ್ದಾರೆ. ಆ ಮೂಲಕ ಈ ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. 1.40 ಕೋಟಿ ಯುವಕರಿಗೆ ಅನ್ಯಾಯ ಮಾಡಲು ಸಿದ್ಧವಾಗಿದೆ. ಅವರ 2 ಕೋಟಿ ಉದ್ಯೋಗ ಸೃಷ್ಟಿ ಕೇವಲ ಚುನಾವಣೆ ಹೇಳಿಕೆ ಎಂಬುದು ಸಾಬೀತಾಗಿದೆ.
ವೇತನ ಶ್ರೇಣಿಯವರಿಗೂ, ರೈತರಿಗೂ, ಸ್ವಯಂ ಉದ್ಯೋಗಸ್ಥರಿಗೂ, ಉದ್ಯೋಗದಾತರು ಹಾಗೂ ಉದ್ಯೋಗಿಗಳು ಸೇರಿದಂತೆ ಯಾವುದೇ ವರ್ಗಕ್ಕೂ ಈ ಬಜೆಟ್ ನಿಂದ ಅನುಕೂಲವಾಗಿಲ್ಲ. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಪೇಶೆಂಟ್ ಹಾಗೂ ಕೋವಿಡ್ ಬಜೆಟ್ ಅನ್ನು ನಾನು ಕಂಡಿರಲಿಲ್ಲ. ಮನೆಗಳ ನಿರ್ಮಾಣ ಹೆಚ್ಚಿಸುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ ಮನೆ ಕಟ್ಟಲು ಬೇಕಾಗಿರುವ ಸಿಮೆಂಟ್, ಕಬ್ಬಿಣ ಮತ್ತಿತರ ವಸ್ತುಗಳ ದರಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದೀರಾ? ಇಲ್ಲ.
ಈ ಸರ್ಕಾರ ಕಾರ್ಪೊರೇಟ್ ಲಾಬಿಗೆ ಮಣಿದು ಅವರಿಗೆ ನೆರವಾಗುವ ಕೆಲಸ ಮಾಡುತ್ತಿದೆಯೇ ಹೊರತು ಜನ ಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳು ಇದರಲ್ಲಿ ಇಲ್ಲ. ಎಲ್ಲರ ಜೇಬಿಗೂ ಕತ್ತರಿ ಹಾಕಿ ಪಿಕ್ ಪಾಕೆಟ್ ಮಾಡುವ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಅವರು, ಕಾವೇರಿ ಹಾಗೂ ಪೆನ್ನಾರ್ ನದಿ ಜೋಡಣೆ ಕರ್ನಾಟಕಕ್ಕೆ ಯಾವ ಅನುಕೂಲವಾಗುತ್ತದೆ? ಕರ್ನಾಟಕಕ್ಕೆ ಅನುಕೂಲವಾಗುವ ಯಾವುದಾದರೂ ಯೋಜನೆ ಪ್ರಕಟಿಸಿದ್ದಾರಾ? ಏನೂ ಇಲ್ಲ. ಅವರಿಗೆ ರಾಜ್ಯದ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಎರಡು ಮೂರು ದಿನಗಳಲ್ಲಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿ ಯೋಜನೆ ಆರಂಭಿಸಲಿ.
ರಾಜ್ಯಗಳಿಗೆ 1 ಲಕ್ಷ ಕೋಟಿ ಸಾಲ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆಯಾ? ಸಾಲ ನೀಡಲು ಬ್ಯಾಂಕ್ ಗಳಿವೆ. ಇವರೇಕೆ ಬೇಕು? ಯಾವುದೂ ಬೇಡ, ಕೇಂದ್ರ ಸರ್ಕಾರ ಡಿಜಿಟಲ್ ಯೂನಿವರ್ಸಿಟಿ ಮಾಡುತ್ತೇವೆ ಎಂದಿದೆ. ಆ ಡಿಜಿಟಲ್ ಯೂನಿವರ್ಸಿಟಿಯನ್ನು ಕರ್ನಾಟಕದಲ್ಲಿ ಮಾಡಿಸಲಿ ನೋಡೋಣ. ನಮ್ಮಲ್ಲಿ ಐಟಿ, ಬಿಟಿ ಕ್ಷೇತ್ರ ಉತ್ತಮವಾಗಿದೆ. ರೈತರ ಜತೆ ಮಾತನಾಡಿ ಅದಕ್ಕೆ ಬೇಕಾದ ಜಮೀನನ್ನು ನಮ್ಮ ಕ್ಷೇತ್ರದಲ್ಲಿ ನೀಡುವ ಕೆಲಸ ಮಾಡುತ್ತೇನೆ’ ಎಂದರು.
ಗ್ರಾಮೀಣ ಅಭಿವೃದ್ಧಿಗೆ ಎಲ್ಲಿ ಆದ್ಯತೆ ನೀಡಿದ್ದಾರೆ? ನರೇಗಾ ಯೋಜನೆಗೆ ನೀಡುವ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಹೆಚ್ಚಿನ ಅನುದಾನ ನೀಡಿದ್ದರೆ ಪಂಚಾಯ್ತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಬಿಜೆಪಿ ಸಂಸದರು ರಾಜ್ಯಕ್ಕಾಗಿ ಏನನ್ನೂ ಕೇಳುತ್ತಿಲ್ಲವೇ ಎಂಬ ಪ್ರಶ್ನೆಗೆ, ‘ಇದೇ ಕಾರಣಕ್ಕೆ ಬಿಜೆಪಿಯ ಎಲ್ಲ ಸಂಸದರಿಗೆ ಸನ್ಮಾನ ಮಾಡಬೇಕು ಎಂದು ಅವರ ಪಕ್ಷದವರಿಗೂ ಹಾಗೂ ನಮ್ಮ ಪಕ್ಷದವರಿಗೂ ಹೇಳುತ್ತೇನೆ’ ಎಂದರು.