ಫೆಬ್ರವರಿ 14 ರ ಪ್ರೇಮಿಗಳ ದಿನದಂದೇ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಈಗಾಗಲೇ ಅವರು ಕಾಂಗ್ರೆಸ್ಗೆ ಗುಡ್ಬೈ ಹೇಳುವುದಾಗಿ ಘೋಷಣೆ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಹೂವಿನ ಹಾರ ಹಾಕಿ ಹೋರಾಟ ಮಾಡುತ್ತೇನೆ. ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತೆ. ನನ್ನ ಜೊತೆ ಸಿದ್ದರಾಮಯ್ಯನವರು ಮಾತನಾಡಿಲ್ಲ. ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ. ಸಿದ್ದರಾಮಯ್ಯನವರು ಕಾಂಗ್ರೆಸ್ನಲ್ಲಿ ಅಸಹಾಯಕರಾಗಿದ್ದಾರೆ. ಅಲಿಂಗ ಸಮಾವೇಶವನ್ನು ಫೆಬ್ರವರಿಯಲ್ಲಿ ಮಾಡುತ್ತೇನೆ. ಕರ್ನಾಟಕದಲ್ಲಿ ಬಸವ ಕೃಪಾದ ಸಿದ್ದಾಂತ ತರುತ್ತೇನೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ.
ಫೆಬ್ರವರಿ 14ರ ನಂತರ ನನ್ನ ಯಾತ್ರೆ ಶುರುವಾಗುತ್ತೆ. ಪ್ರೇಮಿಗಳ ದಿನದಂದೇ ನಾನು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಮತ್ತೆ ದೇಶದಲ್ಲಿ ಕರ್ನಾಟಕದ ಚರಿತ್ರೆ ಬದಲಾಗುತ್ತೆ. ನನಗೆ ರಾಜ್ಯಸಭಾ ಸದಸ್ಯ ಸ್ಥಾನ ತಪ್ಪಿಸಿದ್ರು. ಅವತ್ತು ಮೋಯ್ಲಿ ಸರ್ಕಾರ ಹೋಯ್ತು. ಇವತ್ತು ರಾಜ್ಯದಲ್ಲಿ ನನ್ನ ಕೂಗು ತಲುಪುತ್ತಿದೆ. ನಾನು ಯಾರ ವಿರುದ್ದವೂ ಬಂದಿಲ್ಲ. ನಾನು ಮೂಲಭೂತ ಹಕ್ಕಿನ ಪ್ರಶ್ನೆ ಮಾಡುತ್ತಿದ್ದೇನೆ ಎಂದರು.
ನನಗೆ ದುಡ್ಡಿನ ಶಕ್ತಿ ಇಲ್ಲ ಅಂತ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿಲ್ಲ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಲ್ಲಿ ಅವಕಾಶವಿಲ್ಲ. ಸಿದ್ದರಾಮಯ್ಯನವರಿಗೆ ನಾನು ವಿಶ್ಚನಾಥ್, ರಮೇಶ್ ಕುಮಾರ್ ಚರ್ಚೆ ಮಾಡಿ ಭಾಗ್ಯಗಳನ್ನು ನೀಡಿ ಅಂತ ಹೇಳಿದೆವು. ನಾವು ಸಿದ್ದರಾಮಯ್ಯನವರಿಗೆ ಹಿನ್ನಲೆ ಗಾಯಕರು. ಆದರೆ, ಅವರು ಸತತ ನಾಲ್ಕು ವರ್ಷದಿಂದ ಕತ್ತು ಕೊಯ್ದಿದ್ದಾರೆ. ಟಿಪ್ಪು ಸುಲ್ತಾನ್ ಭೂಮಿಯಲ್ಲಿ ಹುಟ್ಟಿದವರು ನಾವು. ಅಲಿಂಗ ಅಂತ ಚಳುವಳಿ ಶುರು ಮಾಡಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.