ರಾಜ್ಯದಲ್ಲಿ ಹಿಜಾಬ್-ಕೇಸರಿ ವಿವಾದ ಭುಗಿಲೆದ್ದು, ಶೈಕ್ಷಣಿಕ ವಾತಾವರಣ ಹದೆಗೆಟ್ಟಿದೆ. ಈ ವಿವಾದ ಕೋರ್ಟ್ ಅಂಗಳದಲ್ಲಿದೆ. ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಕಾಂಗ್ರೆಸ್ ನ ರಾಷ್ಟ್ರ ಮಟ್ಟದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಕರ್ನಾಟಕ ರಾಜ್ಯದ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪ್ರೀತಿಯ ವಿದ್ಯಾರ್ಥಿಗಳೇ,
ಬೆಂಗಳೂರು ಭಾರತದ *‘ಮಾಹಿತಿ ತಂತ್ರಜ್ಞಾನದ ರಾಜಧಾನಿ.’* ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಇತರೆ ವೃತ್ತಿಪರ ಕಾಲೇಜುಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಭಾರತದ *‘ಶೈಕ್ಷಣಿಕ ಕೇಂದ್ರ ಸ್ಥಾನ’*ವಾಗಿದೆ. ಜತೆಗೆ ಈ ರಾಜ್ಯದಲ್ಲಿ ಯುವಕರಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವ ಅವಕಾಶ ಹೊಂದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದೇಶದ *‘ಆರ್ಥಿಕ ಮತ್ತು ಸೇವಾ ಕೇಂದ್ರ’*ವಾಗಿ ಹೊರಹೊಮ್ಮುತ್ತಿದೆ. ಬಹು ಭಾಷಾ, ಬಹು ಜನಾಂಗ, ಬಹು ಸಂಸ್ಕೃತಿಯ ಗುರುತು ಹೊಂದಿರುವ ಬೆಂಗಳೂರು ಹಾಗೂ ಕರ್ನಾಟಕ ನಮ್ಮ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿದೆ.
ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ದುರುದ್ದೇಶಕ್ಕೆ ಕರ್ನಾಟಕ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಅವರ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದೆ.
ಕೋವಿಡ್ ಪಿಡುಗು ಹಾಗೂ ಈ ಸವಾಲು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರದ ಅಸಮರ್ಥತೆ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜ್ಞಾನ ಸಂಪಾದನೆಗೆ ಧಕ್ಕೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಎದುರಾಗುತ್ತಿದ್ದು, ಅದರಲ್ಲೂ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ, ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ನಡುವೆ ವೈಷಮ್ಯ ಸೃಷ್ಟಿಸಿ ಅವರ ಕೈಗೆ ಚಾಕು, ಚೂರಿ, ಕಲ್ಲುಗಳನ್ನು ಕೊಟ್ಟು ರಾಜ್ಯದ ವಿದ್ಯಾರ್ಥಿ ಸಮುದಾಯದ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ. ದಯವಿಟ್ಟು ಇದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಜೀವನ ಆರಂಭವಾಗುವ ಮುನ್ನವೇ ಅದನ್ನು ಅಂತ್ಯಗೊಳಿಸಲಾಗುತ್ತಿದೆ. ಶೇ.40ರಷ್ಟು ಕಮಿಷನ್, ಕ್ರಿಪ್ಟೋ ಕರೆನ್ಸಿ ಹಗರಣ, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಬದಲಾವಣೆಗೆಗಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ದಾರಿ ಇಲ್ಲದೆ ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ.
ಈ ದುರ್ಮಾರ್ಗಕ್ಕೆ ವಿದ್ಯಾರ್ಥಿಗಳು ಹಾಗೂ ನಮ್ಮ ಮಕ್ಕಳು ಸಿಲುಕಿದರೆ, ಬಿಜೆಪಿಯ ರಾಜಕೀಯ ಹಿತಾಸಕ್ತಿಗೆ ನಿಮ್ಮ ಭವಿಷ್ಯ ನಿರ್ಣಾಮವಾಗಲಿದೆ. ಜತೆಗೆ ಸಂವಿಧಾನದಲ್ಲಿ ನೀಡಲಾಗಿರುವ ಸ್ವಾತಂತ್ರ್ಯ ಹಾಗೂ ಸಮಾನತೆ ಅರ್ಥಹೀನವಾಗಲಿದೆ.
ಬಿಜೆಪಿಯ ದ್ವೇಷದ ಅಜೆಂಡಾವನ್ನು ಧಿಕ್ಕರಿಸಿ ನಾವೆಲ್ಲರೂ ಒಬ್ಬರ ಕೈ ಒಬ್ಬರು ಹಿಡಿದು ಸ್ನೇಹಿತರಾಗಿ ಒಟ್ಟಿಗೆ ಸಾಗೋಣ, ನಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳೋಣ. ಶಂಕರಾಚಾರ್ಯ, ರಾಮಾನುಜಾ ಹಾಗೂ ಬಸವಣ್ಣನ ನಾಡಿನಲ್ಲಿ ಸಾವಿರಾರು ವರ್ಷಗಳಿಂದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಪಾರ್ಸಿಗಳು ಒಟ್ಟಾಗಿ ಬಾಳುತ್ತಿದ್ದಾರೆ. ನಾವು ಒಬ್ಬರ ಆಚಾರ, ವಿಚಾರ, ಸಂಪ್ರದಾಯಗಳನ್ನು ಮತ್ತೊಬ್ಬರು ಹೆಮ್ಮೆಯಿಂದ ಗೌರವಿಸುತ್ತಾ ಬಂದಿದ್ದೇವೆ.
ಕೆಲವೇ ಕೆಲವು ದುಷ್ಟರ ಸ್ವಹಿತಾಸಕ್ತಿಗಾಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ನಮ್ಮ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಅವರ ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಈ ದುಷ್ಟರಿಗೆ ನಿಮ್ಮ ಭವಿಷ್ಯ, ಶಿಕ್ಷಣ, ಉಜ್ವಲ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲ. ಬದಲಿಗೆ ಅವರಿಗೆ ತಮ್ಮ ರಾಜಕೀಯ ಹಿತಾಸಕ್ತಿ ಮಾತ್ರ ಮುಖ್ಯವಾಗಿವೆ. ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಎತ್ತಿ ಹಿಡಿದು ನಾವೆಲ್ಲರೂ ಒಂದಾಗಿ ಶಿಕ್ಷಣದ ಬಗ್ಗೆ ಗಮನಹರಿಸಿ ನಮ್ಮ ರಾಜ್ಯ ಹಾಗೂ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸೋಣ.
ನಾನು ನಿಮ್ಮ ಹಿತೈಷಿಯಾಗಿ, ಮಾಜಿ ಯುವಕನಾಗಿ, ವಿದ್ಯಾರ್ಥಿ ಹೋರಾಟಗಾರನಾಗಿ, ಭಾರತದ ಪ್ರಾಚೀನ ವಿಶ್ವವಿದ್ಯಾಲಯವಾಗಿರುವ ಪಂಜಾಬ್ ವಿವಿಯ ಸೆನೆಟ್, ಸಿಂಡಿಕೇಟ್ ಸದಸ್ಯನಾಗಿ, ಆಡಳಿತಗಾರನಾಗಿ ನನಗಿರುವ ಸುದೀರ್ಘ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ.
ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ.
ಇಂತಿ ನಿಮ್ಮ ವಿಶ್ವಾಸಿ
-ರಣದೀಪ್ ಸಿಂಗ್ ಸುರ್ಜೆವಾಲ