ಹಿಂದೂ ಯುವತಿಯೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಡಬ ತಾಲ್ಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಬಳಿ ನಡೆದಿದೆ.
ಈ ಸಂಬಂಧ ಮುಸ್ಲಿಂ ಯುವಕನೊಬ್ಬ ಕೆಲವು ವ್ಯಕ್ತಿಗಳ ವಿರುದ್ಧ ದಕ್ಷಿಣ ಕನ್ನಡದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಂಗಳವಾರ ಮಧ್ಯಾಹ್ನ 12.15 ಗಂಟೆಗೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ನಜೀರ್ಎಂಬಾತ ತನ್ನ ಪ್ರಿಯತಮೆಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದ.
ಈ ವೇಳೆ ಸುರೇಂದ್ರ, ತೀರ್ಥ ಪ್ರಸಾದ್, ಜಿತೇಶ್ ಮತ್ತು ಇತರರು ಹಲ್ಲೆ ನಡೆಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಚಂದ್ರ ಹಾಗೂ ರಂಜಿತ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನಜೀರ್ ಆಟೋರಿಕ್ಷಾದಲ್ಲಿ ಹಿಂದೂ ಯುವತಿಯೊರ್ವಳನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಗುಂಡ್ಯಕ್ಕೆ ಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ.
ಈ ವೇಳೆ, ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಮತ್ತು ಇತರರು ನಜೀರ್ನ ಅಟೋರಿಕ್ಷಾವನ್ನು ತಡೆದು ನಿಲ್ಲಿಸಿ, ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನಿಮ್ಮ ಹೆಸರೇನು? ಎಂದು ಕೇಳಿದಾಗ ನಜೀರ್ ಮತ್ತು ಜೊತೆಯಲ್ಲಿದ್ದ ಯುವತಿ ತಮ್ಮ ಹೆಸರನ್ನು ಹೇಳಿದಾಗ ಆರೋಪಿಗಳು ನಜೀರ್ ನನ್ನು ಉದ್ದೇಶಿಸಿ ಅಸಭ್ಯ ಪದ ಬಳಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ? ಎಂದು ಹೇಳುತ್ತಾ ಕೈಯಿಂದ ನಜೀರ್ನ ಮುಖಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಸ್ತೆಯ ಬದಿಯ ಪೊದೆಯಿಂದ ಬೆತ್ತವನ್ನು ತುಂಡು ಮಾಡಿಕೊಂಡು ಬಂದು ಬೆತ್ತದಿಂದ ಬೆನ್ನಿಗೆ, ಕಾಲಿಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ದೂರು ನೀಡಲಾಗಿದೆ. ಇಬ್ಬರು ಆರೋಪಿತರು ಎನ್ನಲಾದ ಬಾಲಚಂದ್ರ ಮತ್ತು ರಂಜಿತ್ ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 504, 323, 324, 506 ಮತ್ತು 153(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.