ADVERTISEMENT
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾರಣದಿಂದ ಐಎಎಸ್ ಅಧಿಕಾರಿ ಡಿಕೆ ರವಿ ಮತ್ತು ಕುಸುಮಾ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು.
ಐಎಎಸ್ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆಯ ಬಗ್ಗೆ ಸಿಬಿಐ ಸಲ್ಲಿಸಿರುವ ತನಿಖಾ ವರದಿಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಸಿಬಿಐ ವರದಿಯಲ್ಲಿ ಏನಿದೆ..?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೊತೆಗೆ ತಮ್ಮ ಪತಿ ಡಿ ಕೆ ರವಿ ನಂಟು ಮುಂದುವರೆಸಿದ್ದರ ಬಗ್ಗೆ ಡಿಸೆಂಬರ್ 7, 2014ರಂದು ಸಿಟ್ಟಾಗಿದ್ದ ಕುಸುಮಾ ಹನುಮಂತರಾಯಪ್ಪ ಅವರು ಫೇಸ್ಬುಕ್ ಮೂಲಕ ರೋಹಿಣಿ ಸಿಂಧೂರಿಗೆ ಮೆಸೇಜ್ ಕಳುಹಿಸಿದ್ದರು.
ಒಂದು ವೇಳೆ ನಿನ್ನ ಪತಿಯನ್ನು ಯಾರು ಕಸಿದುಕೊಂಡರೇ ನೀನು ಏನು ಮಾಡುತ್ತೀಯ ಎಂದು ರೋಹಿಣಿ ಸಿಂಧೂರಿಗೆ ಕುಸುಮಾ ಅವರು ಪ್ರಶ್ನಿಸಿ ಸಂದೇಶ ಕಳುಹಿಸಿದ್ದರು.
ಡಿಕೆ ರವಿ ಪತ್ನಿ ಕುಸುಮಾ ಅವರು ಕಳುಹಿಸಿದ್ದ ಈ ಫೇಸ್ಬುಕ್ ಮೆಸೇಜ್ನ್ನು ರೋಹಿಣಿ ಸಿಂಧೂರಿ ಅವರು ಡಿಕೆ ರವಿಗೆ ಫಾರ್ವಡ್ ಮಾಡಿದ್ದರು.
ರೋಹಿಣಿ ಸಿಂಧೂರಿ ಫಾರ್ವಡ್ ಮಾಡಿದ ಆ ಸಂದೇಶದಿಂದ ಡಿಕೆ ರವಿ ಮತ್ತು ಕುಸುಮಾ ನಡುವೆ ಜಗಳ ನಡೆದು, ಕೊನೆಗೆ ಕುಸುಮಾ ಅವರು ಅನಿವಾರ್ಯವಾಗಿ ರೋಹಿಣಿ ಸಿಂಧೂರಿಗೆ ಕ್ಷಮೆ ಕೇಳಬೇಕಾಯಿತು.
ಇದಾದ ಬಳಿಕ ಡಿಸೆಂಬರ್ 7, 2014ರಂದು ಡಿಕೆ ರವಿ ಅವರು ರೋಹಿಣಿ ಅವರಿಗೆ ನಾನಾ ವಾಟ್ಸಾಪ್ ಮೆಸೇಜ್ಗಳನ್ನು ಮಾಡಿದ್ದರು.
ಡಿಸೆಂಬರ್ 7, 2014, ಮದ್ಯಾಹ್ನ 3 ಗಂಟೆ 6 ನಿಮಿಷ:
ನಾನು ಕುಸುಮಾಗೆ ಹೇಳಿದ್ದೀನಿ, ಒಂದು ವೇಳೆ ರೋಹಿಣಿ ನನ್ನ ಜೊತೆ ಮಾತಾಡಲ್ಲ ಅಂದ್ರೆ ನಾನು ನಿನ್ನ ಜೊತೆಗೆ (ಕುಸುಮಾ ) ಜೊತೆಗೆ ಇರಲ್ಲ. ಕುಸುಮಾ ಕ್ಷಮಿಸಲಾಗದ ದೊಡ್ಡ ತಪ್ಪು ಮಾಡಿದ್ದಾಳೆ, ನಾನು ಆಕೆಗೆ (ಕುಸುಮಾಗೆ) ಹೇಳಿದ್ದೀನಿ, ನನಗೆ ಮಗು ಬೇಕಿಲ್ಲ, ಆಸ್ಪತ್ರೆಗೆ ಇನ್ಮುಂದೆ ಹೋಗಲ್ಲ.
ಡಿಸೆಂಬರ್ 7, 2014 ಮಧ್ಯಾಹ್ನ 3 ಗಂಟೆ 6 ನಿಮಿಷ:
ರೋಹಿಣಿ ಕ್ಷಮಿಸು ಒಂದು ವೇಳೆ ನಿನಗೆ ನಾನು ನೋಯಿಸಿದ್ದರೆ.
ಡಿಸೆಂಬರ್ 7, 2014, ಮಧ್ಯಾಹ್ನ 3 ಗಂಟೆ 6 ನಿಮಿಷ:
ಇನ್ನೊಂದು ವಾರದಲ್ಲಿ ನಾನು ಜೀವನ್ಭೀಮಾ ನಗರಕ್ಕೆ ಶಿಫ್ಟ್ ಆಗ್ತಿದ್ದೀನಿ
ಡಿಸೆಂಬರ್ 7, 2014 ಮಧ್ಯಾಹ್ನ 3 ಗಂಟೆ 8 ನಿಮಿಷ:
ನಿನ್ನ (ರೋಹಿಣಿ ಸಿಂಧೂರಿ) ಯಾವುದೇ ತಪ್ಪಿಲ್ಲದೇ ನೀವು ನೋವು ಅನುಭವಿಸ್ತಿದ್ದೀಯ. ನನ್ನಿಂದ ನಿಜಕ್ಕೂ ಸಾರಿ.
ಡಿಸೆಂಬರ್ 7, 2014 ಮಧ್ಯಾಹ್ನ 3 ಗಂಟೆ 9 ನಿಮಿಷ
ಆ ಒಂದು ತಪ್ಪಿಗಾಗಿ ಕುಸುಮಾ ಪರಿಣಾಮಗಳನ್ನು ಅನುಭವಿಸ್ತಾಳೆ.
ಇದಾದ ಬಳಿಕ ಮರು ದಿನ ಅಂದರೆ ಡಿಸೆಂಬರ್ 8ರಂದು ಮಧ್ಯರಾತ್ರಿ 1.34ರ ವೇಳೆ ಕೂಡಾ ರೋಹಿಣಿ ಸಿಂಧೂರಿಗೆ ಡಿಕೆ ರವಿ ವಾಟ್ಸಾಪ್ ಮೆಸೇಜ್ಗಳನ್ನು ಮಾಡ್ತಾರೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಕರೆಗಳನ್ನು ಮಾಡ್ತಾರೆ.
ಡಿಸೆಂಬರ್ 8, ನಸುಕಿನ ಜಾವ 4 ಗಂಟೆ 17 ನಿಮಿಷ:
ಬೇಬಿ, ನನಗೆ ನಿಜಕ್ಕೂ ನಿನ್ನ ಜೊತೆ ಮಾತಾಡ್ಬೇಕು ಅನಿಸ್ತಿದೆ. ಆಕೆ (ಕುಸುಮಾ) ತಾನು ಯಾಕೆ ಹಾಗೆ ಮಾಡಿದಳು ಎಂದು ನನಗೆ ವಿವರಿಸಿದ್ದಾಳೆ.
ಭೇಟಿ, ನಿರಂತರ ಕರೆ, ವಾಟ್ಸಾಪ್ ಮೆಸೇಜ್:
2014ರಲ್ಲಿ ಡಿ ಕೆ ರವಿ ಮತ್ತು ರೋಹಿಣಿ ಸಿಂಧೂರಿ ಮೈಸೂರಲ್ಲಿ ಭೇಟಿ ಆಗಿದ್ದರು. ಈ ವೇಳೆ ರೋಹಿಣಿ ಸಿಂಧೂರಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದರು. ನವೆಂಬರ್ 17ರಂದು ಇಬ್ಬರೂ ನಂಜನಗೂಡು ದೇವಸ್ಥಾನಕ್ಕೆ ತೆರಳಿದ್ದರು ಎಂದು ಡಿ ಕೆ ರವಿ ಅವರ ಕಾರು ಚಾಲಕ ಕೊಟ್ಟ ಹೇಳಿಕೆಯನ್ನು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
2014ರಲ್ಲಿ ಡಿಕೆ ರವಿ ಮತ್ತು ರೋಹಿಣಿ ಸಿಂಧೂರಿ ನಿರಂತರವಾಗಿ ಪ್ರತಿ ದಿನ ಹಲವಾರು ಬಾರಿ ದೂರವಾಣಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು, ಇಬ್ಬರ ನಡುವೆ ವಾಟ್ಸಾಪ್ ಚ್ಯಾಟ್ ನಡೆದಿತ್ತು ಎಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ರೋಹಿಣಿ ಸಿಂಧೂರಿ ಮತ್ತು ಡಿಕೆ ರವಿ ನಡುವಿನ ದೂರವಾಣಿ ಸಂಭಾಷಣೆಯ ಸಿಡಿಆರ್ (Call Record Details) ಮತ್ತು ವಾಟ್ಸಾಪ್ ಚ್ಯಾಟ್ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಿಬಿಐ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖ ಮಾಡಿದೆ.
ಕುಸುಮಾ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟಿದ್ದ ಡಿಕೆ ರವಿ:
2014ರ ನವೆಂಬರ್ನಲ್ಲಿ ವಿಚಲಿತರಾಗಿದ್ದಂತೆ ಇದ್ದ ಡಿಕೆ ರವಿ ಒಂದು ಮನೆಗೆ ಬಂದು ತಮ್ಮ ಪತ್ನಿ ಕುಸುಮಾ ಅವರ ಮಡಿಲಲ್ಲಿ ತಲೆ ಇಟ್ಟು ನಿನಗೂ, ನನ್ನ ಅಮ್ಮನಿಗೂ ನಾನು ಏನಾದರೂ ಮಾಡಬೇಕಿತ್ತು ಎಂದು ನೊಂದು ಮಾತಾಡಿದ್ದರು ಎಂದು ಕುಸುಮಾ ಅವರು ಕೊಟ್ಟ ಹೇಳಿಕೆಯನ್ನು ಸಿಬಿಐ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ADVERTISEMENT