ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಮರಳುಗಾಡಿನ ರಾಜ್ಯ ರಾಜಸ್ಥಾನದಲ್ಲಿ ಹೊಸ ಭರವಸೆಯನ್ನು ಕೊಟ್ಟಿದ್ದಾರೆ.
ನಿಮ್ಮನ್ನು ಲೂಟಿ ಮಾಡುವ ಯಾವ ಅವಕಾಶವನ್ನೂ ಕಾಂಗ್ರೆಸ್ ಬಿಡಲ್ಲ. ರಾಜಸ್ಥಾನಕ್ಕಿಂತ ಹರಿಯಾಣ, ಉತ್ತರಪ್ರದೇಶ ಮತ್ತು ಗುಜರಾತ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ೧೨ರಿಂದ ೧೩ ರೂಪಾಯಿಯಷ್ಟು ಕಡಿಮೆ ಇದೆ.
ನಾವು ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತೇವೆ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುತ್ತೇವೆ
ಎಂದು ಪ್ರಧಾನಿಯವರು ಹೇಳಿದ್ದಾರೆ.
೨೦೧೪ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದೇ ಅಚ್ಛೇದಿನ್ ಘೋಷಣೆಯೊಂದಿಗೆ.
ಕಳೆದ ವರ್ಷ ಅಂದರೆ ಆಗಸ್ಟ್ ೨೨ರಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯವೇ ಕೊಟ್ಟ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಬಕಾರಿ ಸುಂಕದ ಕಾರಣದಿಂದಲೇ ಪೆಟ್ರೋಲ್-ಡೀಸೆಲ್ ಭಾರೀ ದುಬಾರಿಯಾಗಿದೆ.
೨೦೧೪ರಲ್ಲಿ ನರೇಂದ್ರ ಮೋದಿ ಸರ್ಕಾರ ಬರುವುದಕ್ಕೂ ಮೊದಲು ಪೆಟ್ರೋಲ್ ಮೇಲಿದ್ದ ಅಬಕಾರಿ ಸುಂಕ ಲೀಟರ್ಗೆ ೯ ರೂಪಾಯಿ ೪೮ ಪೈಸೆ. ಡೀಸೆಲ್ ಮೇಲಿದ್ದ ಅಬಕಾರಿ ಸುಂಕ ೩ ರೂಪಾಯಿ ೫೬ ಪೈಸೆ.
ಆದರೆ ಮೇ ೨೦೨೦ರ ವೇಳೆಗೆ ಅಬಕಾರಿ ಸುಂಕದ ಮೊತ್ತ ಲೀಟರ್ಗೆ ೩೨ ರೂಪಾಯಿವರೆಗೆ ಹೆಚ್ಚಳವಾಯಿತು. ಅಂದರೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ಗೆ ಬರೋಬ್ಬರೀ ೨೩ ರೂಪಾಯಿ ಹೆಚ್ಚಳವಾಯಿತು. ಡೀಸೆಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರೀ ೨೮ ರೂಪಾಯಿ ಹೆಚ್ಚಳ ಆಯಿತು.
೨೦೧೪-೧೫ರ ಆರ್ಥಿಕ ವರ್ಷದಲ್ಲಿ ೧.೭೨ ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಪೆಟ್ರೋಲಿಯಂ ಮೇಲಿನ ಅಬಕಾರಿ ಸುಂಕದ ಸಂಗ್ರಹ ೨೦೨೧-೨೨ರ ವೇಳೆಗೆ ೪.೯೨ ಲಕ್ಷ ಕೋಟಿ ರೂಪಾಯಿಗೆ ಅಂದರೆ ಮೂರು ಪಟ್ಟು ಹೆಚ್ಚಳ ಆಯಿತು.
೨೦೨೧ರ ನವೆಂಬರ್ ಮತ್ತು ೨೦೨೨ರ ಮೇನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಒಟ್ಟು ೧೩ ರೂಪಾಯಿಯಷ್ಟು ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ೧೬ ರೂಪಾಯಿಯಷ್ಟು ಇಳಿಕೆ ಮಾಡಿತ್ತು.
ಅಬಕಾರಿ ಸುಂಕ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಕೇವಲ ೭ ವರ್ಷಗಳಲ್ಲಿ ಅಂದರೆ ೨೦೨೧ರ ನವೆಂಬರ್ವರೆಗೆ ಶೇಕಡಾ ೧೮೬ರಷ್ಟು ಆದಾಯ ಹೆಚ್ಚಳವಾಗಿದ್ದರೆ, ರಾಜ್ಯಗಳ ಆದಾಯ ಶೇಕಡಾ ೭೫ರಷ್ಟು ಹೆಚ್ಚಳವಾಗಿತ್ತು. ಅಂದರೆ ಅಬಕಾರಿ ಸುಂಕ ಹೆಚ್ಚಳದ ಬಹುದೊಡ್ಡ ಲಾಭವಾಗಿದ್ದು ಕೇಂದ್ರ ಸರ್ಕಾರಕ್ಕೆ ರಾಜ್ಯಗಳಿಗಲ್ಲ.
೨೦೧೪ವರೆಗೆ ಅಂದರೆ ಮೋದಿ ಸರ್ಕಾರ ಬರುವುದಕ್ಕೂ ಮೊದಲಿದ್ದ ಅಬಕಾರಿ ಸುಂಕಕ್ಕೂ ೨೦೨೨ರ ಮೇನಲ್ಲಾದ ಎರಡನೇ ಅಬಕಾರಿ ಸುಂಕ ಕಡಿತದ ಬಳಿಕವೂ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಹೇರಿರುವ ಅಬಕಾರಿ ಸುಂಕದ ಮೊತ್ತ ೧೦ ರೂಪಾಯಿ ಹೆಚ್ಚು (ಈಗ ಲೀಟರ್ಗೆ ೧೯ ರೂಪಾಯಿ ೯೦ ಪೈಸೆ), ಡೀಸೆಲ್ ಮೇಲೆ ೧೨ ರೂಪಾಯಿ ಹೆಚ್ಚು (ಈಗ ಲೀಟರ್ಗೆ ೧೫ ರೂಪಾಯಿ ೮೦ ಪೈಸೆ).
ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತದ ಹೊರತಾಗಿಯೂ, ರಾಜ್ಯಗಳಲ್ಲೂ ತೆರಿಗೆ ಕಡಿತದ ಹೊರತಾಗಿಯೂ ದೇಶದ ಎಲ್ಲ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ೧೦೦ ರೂಪಾಯಿ ಮತ್ತು ೯೦ ರೂಪಾಯಿ ಗಡಿ ದಾಟಿಯೇ ಇದೆ.
ಉದಾಹರಣೆಗೆ ಕರ್ನಾಟಕದಲ್ಲೇ ಲೀಟರ್ಗೆ ಪೆಟ್ರೋಲ್ ದರ ೧೦೧ ರೂಪಾಯಿಯಿಂದ ೧೦೩ ರೂಪಾಯಿವರೆಗೆ ಇದೆ (ಜಿಲ್ಲಾವಾರು ವ್ಯತ್ಯಾಸ ಆಧರಿಸಿ). ಡೀಸೆಲ್ ದರ ಲೀಟರ್ಗೆ ೮೭ ರೂಪಾಯಿಯಿಂದ ೯೦ ರೂಪಾಯಿವರೆಗೆ ಇದೆ.
ಅಂದರೆ ತೆರಿಗೆ ಕಡಿತದ ಬಳಿಕವೂ ಪೆಟ್ರೋಲ್ ಲೀಟರ್ಗೆ ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ ಲೀಟರ್ಗೆ ೩೦ ರೂಪಾಯಿಯಷ್ಟು ದುಬಾರಿಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಕಚ್ಚಾತೈಲ ದರ ಏರಿಳಿತ ಮತ್ತು ರೂಪಾಯಿ-ಡಾಲರ್ ನಡುವಿನ ವಿನಿಮಯ ಮೌಲ್ಯ ಆಧರಿಸಿ ಪ್ರತಿ ದಿನ ಬೆಳಗ್ಗೆ ೬ ಗಂಟೆಗೆ ತೈಲ ಕಂಪನಿಗಳು ಪೆಟ್ರೋಲ್-ಡೀಸೆಲ್ ಬದಲಾವಣೆ ಮಾಡುತ್ತವೆ.
ರಷ್ಯಾದಿಂದ ಅಗ್ಗದ ಕಚ್ಚಾತೈಲ ಖರೀದಿ ಮಾಡುವುದರಿಂದ ಭಾರತದ ಜನಸಾಮಾನ್ಯರಿಗೆ ಲಾಭ ಆಗುತ್ತದೆ ಎಂದು ಹೇಳುತ್ತಿದ್ದ ಬಿಜೆಪಿಯವರು ಆ ಲಾಭ ಎಲ್ಲಿ, ಯಾರಿಗೆ ಸಿಕ್ಕಿದೆ ಎಂಬುದನ್ನಷ್ಟೇ ಹೇಳಬೇಕಿದೆ.
ಒಂದು ವೇಳೆ ಪ್ರಧಾನಿ ಮೋದಿಯವರ ಪ್ರಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಲೂಟಿ ಎನ್ನುವುದಾದರೆ, ಬೆಲೆ ಏರಿಕೆ ಭ್ರಷ್ಟಾಚಾರ ಎನ್ನುವುದಾದರೆ ಮೊದಲಿಗೆ ತಾವು ಮಾಡಬೇಕಿರುವ ಕೆಲಸ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಇನ್ನಷ್ಟು ಇಳಿಸುವುದು.
ಅದರಲ್ಲೂ ವಿಶೇಷವಾಗಿ ಯುಪಿಎ ಅವಧಿಯಲ್ಲಿ ಪೆಟ್ರೋಲ್-ಡೀಸೆಲ್ ಮೇಲಿದ್ದ ತೆರಿಗೆಯನ್ನೇ ಖಂಡಿಸುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಅದಕ್ಕಿಂತಲೂ ಕಡಿಮೆ ಅಬಕಾರಿ ಸುಂಕ ವಿಧಿಸಿ ನುಡಿದಂತೆ ನಡೆಯಬೇಕಷ್ಟೇ.
ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದರೆ ಬೆಲೆ ಇಳಿಸುವ ಮಾತಾಡಿರುವ ಪ್ರಧಾನಿಗಳು ಆರು ತಿಂಗಳ ಹಿಂದೆ ಇದ್ದ ಕರ್ನಾಟಕದಲ್ಲಿ ತಮ್ಮ ಪಕ್ಷದ ಸರ್ಕಾರದ ಮೂಲಕವೇ ಅದನ್ನು ಮಾಡಿ ತೋರಿಸಬೇಕಿತ್ತು. ಕಾರಣ ಬೆಲೆ ಏರಿಕೆ ಇಡೀ ದೇಶವನ್ನೇ ಕಾಡುತ್ತಿದೆ ಎಂಬ ಸತ್ಯ ಪ್ರಧಾನಿ ಮೋದಿಯವರಿಗೂ ಗೊತ್ತಿದೆ.