ಬೇರೆ ಪಕ್ಷಗಳಿಗೂ ಆಮ್ ಆದ್ಮಿ ಪಾರ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಬೇರೆ ಪಕ್ಷಗಳು ಹಾಗೂ ಅವುಗಳ ನಾಯಕರು ಹಣಬಲದಲ್ಲಿ ಮಾತ್ರ ಶ್ರೀಮಂತರಾಗಿದ್ದಾರೆ. ನೈತಿಕತೆಯಲ್ಲಿ ಅವರೆಲ್ಲ ಬಡವರು. ಆದರೆ ಆಮ್ ಆದ್ಮಿ ಪಾರ್ಟಿಯು ವಿಚಾರದಲ್ಲಿ ಶ್ರೀಮಂತವಾಗಿದೆ ಎಂದು ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ ಸೇರಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಮಾತನಾಡಿದ ಭಾಸ್ಕರ್ ರಾವ್, ಕರ್ನಾಟಕಕ್ಕೆ ನೆಲ, ಜಲ, ಸಂಪನ್ಮೂಲಗಳ ಕೊರತೆಯಿಲ್ಲ. ಇವೆಲ್ಲ ಇದ್ದರೂ ಆಡಳಿತಗಾರರ ನಿರ್ಲಕ್ಷ್ಯದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆಳುವ ರಾಜಕಾರಣಿಗಳು ಸಾಮಾನ್ಯ ಜನರ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಎನ್ನುವುದನ್ನು ಕೋವಿಡ್ ಸಂದರ್ಭದಲ್ಲಿ ಗಮನಿಸಿದ್ದೇನೆ. ಸರ್ಕಾರದ ಬೊಕ್ಕಸದಿಂದ ಲಕ್ಷ ಕೋಟಿ ರೂಪಾಯಿ ಖರ್ಚಾಗುತ್ತಿದ್ದರೂ, ಜನರಿಗೆ ಮಾತ್ರ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಎಲ್ಲ ಹಣವು ಭ್ರಷ್ಟ ರಾಜಕಾರಣಿಗಳ ಪಾಲಾಗುತ್ತಿದೆ” ಎಂದು ಹೇಳಿದರು.
“ಬೇರೆ ಪಕ್ಷಗಳಿಗೂ ಆಮ್ ಆದ್ಮಿ ಪಾರ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಬೇರೆ ಪಕ್ಷಗಳು ಹಾಗೂ ಅವುಗಳ ನಾಯಕರು ಹಣಬಲದಲ್ಲಿ ಮಾತ್ರ ಶ್ರೀಮಂತರಾಗಿದ್ದಾರೆ. ನೈತಿಕತೆಯಲ್ಲಿ ಅವರೆಲ್ಲ ಬಡವರು. ಆದರೆ ಆಮ್ ಆದ್ಮಿ ಪಾರ್ಟಿಯು ವಿಚಾರದಲ್ಲಿ ಶ್ರೀಮಂತವಾಗಿದೆ. ಪ್ರಾಮಾಣಿಕತೆ ಹಾಗೂ ಸ್ವಚ್ಛ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡುವ ನೈತಿಕತೆಯನ್ನು ಎಎಪಿ ಉಳಿಸಿಕೊಂಡಿದೆ” ಎಂದು ಭಾಸ್ಕರ್ ರಾವ್ ಹೇಳಿದರು.
“ಯಾವ ಸರ್ಕಾರಗಳ ಬಳಿಯೂ ಹಣದ ಕೊರತೆಯಿಲ್ಲ. ಆದರೆ ಪ್ರಾಮಾಣಿಕತೆ ಹಾಗೂ ಇಚ್ಛಾಶಕ್ತಿಯ ಕೊರತೆಯಿದೆ. ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರಿಂದಲೇ, ಅಲ್ಲಿ ಭಾರೀ ಪ್ರಮಾಣದ ಹಣ ಉಳಿತಾಯವಾಯಿತು. ಅದನ್ನು ಜನರ ಕಲ್ಯಾಣಕ್ಕೆ ಅಲ್ಲಿನ ಸರ್ಕಾರ ಬಳಸಿಕೊಂಡಿತು. ವಿದ್ಯುತ್, ಗುಣಮಟ್ಟದ ಶಿಕ್ಷಣ, ಕುಡಿಯುವ ನೀರು, ಸಾರಿಗೆ ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ಕೊಡುವುದರಲ್ಲಿ ದೆಹಲಿ ಸರ್ಕಾರ ಯಶಸ್ವಿಯಾಗಿದೆ” ಎಂದು ಭಾಸ್ಕರ್ ರಾವ್ ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಯಾವಾಗ ಎಎಪಿಯು ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಾವೆಲ್ಲ ಬಹಳ ವರ್ಷಗಳ ಹಿಂದೆಯೇ ಕೇಜ್ರಿವಾಲ್ರವರನ್ನು ಕೇಳುತ್ತಿದ್ದೆವು. ಈ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಬಾರದು, ಜನರು ತೆಗೆದುಕೊಳ್ಳಬೇಕು ಎಂದು ಕೇಜ್ರಿವಾಲ್ ಉತ್ತರಿಸುತ್ತಿದ್ದರು, ಆ ಸಮಯ ಈಗ ಬಂದಿದ್ದು, ಕರ್ನಾಟಕದ ಜನರು ಎಎಪಿಯತ್ತ ಒಲವು ತೋರುತ್ತಿದ್ದಾರೆ. ಹಿರಿಯ ಅಧಿಕಾರಿಗಳು, ಗಣ್ಯರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರಲು ಬಯಸುತ್ತಿದ್ದಾರೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯ ಸಂಘಟನಾ ಪ್ರಮುಖ ಡಾ. ದಾಮೋದರನ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ್ ಶರ್ಮ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮತ್ತಿತರ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.