ಸದ್ಯಕ್ಕೆ ಯಾವುದೇ ಹೊಸ ಪಕ್ಷ ಸ್ಥಾಪನೆ ಮಾಡಲ್ಲ. ಆದರೆ, ಬಿಹಾರ ಸುಧಾರಣೆಗಾಗಿ 3 ಸಾವಿರ ಕಿ.ಮೀಟರ್ ಪಾದಯಾತ್ರೆ ಮಾಡುವುದಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಚಂಪಾರಣ್ ಗಾಂಧಿ ಆಶ್ರಮದಿಂದ ಅಕ್ಟೋಬರ್ 2 ರಂದು 3 ಸಾವಿರ ಕಿ.ಮೀ. ಪಾದಯಾತ್ರೆ ಆರಂಭಿಸುತ್ತೇನೆ. ಬಿಹಾರದ ಬಹುತೇಕ ಭಾಗದಲ್ಲಿ ಯಾತ್ರೆ ನಡೆಸುವ ಗುರಿ ಇದೆ. ಜನರನ್ನು ಕಚೇರಿಗಳಲ್ಲಿ ಹಾಗೂ ಅವರ ಮನೆಗಳಲ್ಲಿ ನಾವು ಭೇಟಿ ಮಾಡಿ, ಅವರ ಸಮಸ್ಯೆಗಳು ಹಾಗೂ ನಿರೀಕ್ಷೆಗಳನ್ನು ಅರಿತುಕೊಳ್ಳುತ್ತೇವೆ.
ಪ್ರಸ್ತುತ ಯಾವುದೇ ರಾಜಕೀಯ ಪಕ್ಷವನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಬಿಹಾರದ ಸಮಸ್ಯೆಗಳ ಬಗ್ಗೆ ಅರಿವಿರುವ ಸುಮಾರು 17,000 ದಿಂದ 18,000 ಜನರೊಂದಿಗೆ ನಾನು ಮಾತನಾಡಲಿದ್ದೇನೆ ಹಾಗೂ ಅವರನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನಿಸುತ್ತೇನೆ. ಆ ಪ್ರಕ್ರಿಯೆಯನ್ನು ನಾನು ಆಗಸ್ಟ್ನಿಂದ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಬೇಕಿದೆ ಎಂದರು.
ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಅವರ 30 ವರ್ಷಗಳ ಆಡಳಿತದ ಬಳಿಕ ಬಿಹಾರವು ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ಬಿಹಾರವು ಅಭಿವೃದ್ಧಿ ಆಗಬೇಕಾದರೆ, ಕಳೆದ 10–15 ವರ್ಷಗಳಿಂದ ಸಾಗುತ್ತಿರುವ ಹಾದಿಯಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕೆ ಹೊಸ ಪಥದ ಅವಶ್ಯಕತೆ ಇದೆ’ ಎನ್ನುವ ಮೂಲಕ ಲಾಲೂ, ನಿತೀಶ್ ಆಡಳಿತವನ್ನು ಟೀಕಿಸಿದರು.
ಬಿಹಾರದ ಶಿಕ್ಷಣ ವ್ಯವಸ್ಥೆ ಮತ್ತು ಆರೋಗ್ಯ ಮೂಲಸೌಕರ್ಯಗಳು ಕುಂಟುತ್ತ ಸಾಗಿವೆ. ಬಿಹಾರದ ಯುವಕರು ಉದ್ಯೋಗಕ್ಕಾಗಿ ರಾಜ್ಯದಿಂದ ಹೊರಗೆ ಹೋಗುತ್ತಿದ್ದಾರೆ. ಇದು ಬದಲಾಗಬೇಕಿದೆ. ಒಬ್ಬ ವ್ಯಕ್ತಿಯಿಂದ ಇದು ಸಾಧ್ಯವಾಗುವುದಿಲ್ಲ. ನಿಜಕ್ಕೂ ಬಿಹಾರದಲ್ಲಿ ಬದಲಾವಣೆ ಬಯಸುವವರು ಒಟ್ಟಾಗಿ ಮುಂದೆ ಬರಬೇಕು ಎಂದು ಪ್ರಶಾಂತ್ ಬಿಹಾರಿಗಳನ್ನು ಆಹ್ವಾನಿಸಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಮೇ 2 ರಂದು ಕಾಂಗ್ರೆಸ್ ಪಕ್ಷದ ಸೇರ್ಪಡೆ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.