ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಫಸ್ಟ್ ರ್ಯಾಂಕ್ ಪಡೆದಿದ್ದ ಅಭ್ಯರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪಿಎಸ್ಐ ನೇಮಕಾತಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಫಸ್ಟ್ ರ್ಯಾಂಕ್ ಬಂದಿದ್ದ ಮಾಗಡಿ ತಾಲ್ಲೂಕಿನ ನಿವಾಸಿ ಜೆ.ಕುಶಾಲ್ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.
ಬಂಧಿತ ಆರೋಪಿ ಪ್ರಮುಖ ರಾಜಕಾರಣಿಯೊಬ್ಬರ ಮಗ ಎನ್ನಲಾಗಿದೆ. ಈತ 200 ಅಂಕಗಳಿಗೆ 168 ಅಂಕ ಪಡೆಯುವ ಮೂಲಕ 545 ಅಭ್ಯರ್ಥಿಗಳ ಆಯ್ಕೆಯಪಟ್ಟಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ. ಈತ ಪ್ರಮುಖ ಆರೋಪಿ ದರ್ಶನ್ಗೌಡ ಜೊತೆ ಸ್ನೇಹ ಹೊಂದಿದ್ದ. ಇಂದು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್ ಗೌಡನನ್ನು ಈಚೆಗಷ್ಟೇ ಪೊಲೀಸರು ಬಂಧಿದ್ದಾರೆ. ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್ಸ್ಟೇಬಲ್ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್ನನ್ನು ಬಂಧಿಸಿದ್ದಾರೆ.
ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.