ADVERTISEMENT
ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಕೊಡುವಂತೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯರಾಮ್ ಅಮೀನ್ ಅವರ ಕಚೇರಿಗೆ ನುಗ್ಗಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಬೋಳಿಯಾರ್, ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ರಮೇಶ್ ಮತ್ತು ಇತರರ ಗುಂಪು ಬೆದರಿಕೆ ಹಾಕಿದ್ದರ ಸಂಬಂಧ ಕುಲಪತಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 1ರಂದು ನಡೆದಿರುವ ಘಟನೆ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿರುವ ಕುಲಪತಿಗಳು ಬೆದರಿಕೆ ಮತ್ತು ವೈಯಕ್ತಿಕ ಆಕ್ರಮಣದ ವರ್ತನೆ ಪ್ರದರ್ಶಿಸಿದ್ದಾರೆ ಎಂದೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರ ವಿರುದ್ಧ ದೂರಿದ್ದಾರೆ.
ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲೇ ಗಣೇಶೋತ್ಸವ ಆಚರಿಸುವ ಬಗ್ಗೆ ಮಾರ್ಗದರ್ಶನ ನೀಡುವಂತೆಯೂ ಕುಲಪತಿಗಳು ಮಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.
ಶಾಸಕ ಮತ್ತು ಅವರ ಬೆಂಬಲಿಗರ ವಿರುದ್ಧ ಸಲ್ಲಿಕೆ ಆಗಿರುವ ದೂರಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
“ಎಬಿವಿಪಿ ಬೇಡಿಕೆಯಂತೆ ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು, ವಿ ವಿ ವತಿಯಿಂದಲೇ ಗಣೇಶೋತ್ಸವ ಮಾಡಬೇಕು” ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತರು ಎಸಗಿದ ಗೂಂಡಾಗಿರಿ ಹಾಗೂ ಒಟ್ಟು ಪ್ರಕರಣದ ಕುರಿತು ಪೂರ್ಣ ವಿವರವಾಗಿ ಮಂಗಳೂರು ವಿ ವಿ ಕುಲಪತಿ ಜಯರಾಮ ಅಮೀನ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮಾರ್ಗದರ್ಶನ ಮಾಡುವಂತೆ ವಿನಂತಿಸಿದ್ದಾರೆ. ಅದರ ಪ್ರತಿ ಲಭ್ಯವಾಗಿದೆ.
ಶಾಸಕರು ಸ್ಥಳೀಯ ಏಳೆಂಟು ಬಿಜೆಪಿ ಮುಖಂಡರ ತಂಡಸದೊಂದಿಗೆ ಕುಲಪತಿ ಕಚೇರಿಗೆ ಅಕ್ಷರಶಃ ನುಗ್ಗಿದ್ದಾರೆ. ಗಣೇಶೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಆಕ್ರಮಣಕಾರಿಯಾಗಿ ಆಗ್ರಹಿಸಿದ್ದಾರೆ. ಒಪ್ಪದೇ ಇದ್ದದ್ದಕ್ಕೆ ಸತತ ಎರಡು ಗಂಟೆಗಳ ಕಾಲ ಕುಲಪತಿಗಳನ್ನು ಅವರದ್ದೆ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಥೇಟ್ ರೌಡಿಗಳಂತೆ ಬೆದರಿಸಿದ್ದಾರೆ. ಇದು ಅನಾಗರಿಕ ನಡೆ ಮಾತ್ರ ಅಲ್ಲ. ತೋಳ್ಬಲದಿಂದಲೇ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಸಾಧಿಸಿ ಬಿಡುತ್ತೇವೆ ಎಂಬ ದುರಹಂಕಾರ. ದೂರದ ಉತ್ತರ ಭಾರತದ ಮಾದರಿಯನ್ನು ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಅನುಕರಿಸಿದ್ದಾರೆ. ತುಳುನಾಡಿಗೆ ಇದು ಹೊಸತು. ಇಂತಹ ನಡೆಗಳನ್ನು ಈಗಲೇ ಬಲವಾಗಿ ವಿರೋಧಿಸಬೇಕು. ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ.
ಸಜ್ಜನರಾದ ಕುಲಪತಿ ಜಯರಾಜ ಅಮೀನ್ ಇದನ್ನೆಲ್ಲ ಸೌಮ್ಯ ಭಾಷೆಯಲ್ಲೇ ಸರಕಾರದ ಗಮನಕ್ಕೆ ತಂದಿದ್ದಾರೆ. ಶಾಸಕರು ಕುಲಪತಿಗಳು ವಿವರಿಸಿದ್ದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ದೌರ್ಜನ್ಯ ಎಸಗಿದ್ದಾರೆ. ಈಗ ಎಂದಿನಂತೆ ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟು (ದುರಪಯೋಗ ಪಡಿಸಿ) ಹಿಂದೂ ವಿರೋಧಿ ಕುಲಪತಿ ವಿರುದ್ದ ಪ್ರತಿಭಟನಾ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಈಗ ಎಲ್ಲೂ ಒಂದಾಗಿ ಶಾಸಕರ ಗೂಂಡಾಗಿರಿ, ಸಂವಿಧಾನ, ಕಾನೂನು ವಿರೋಧಿ ನಡೆಯನ್ನು ಪ್ರತಿಭಟಿಸಬೇಕು
ಎಂದು ಬರೆದಿದ್ದಾರೆ.
ADVERTISEMENT