ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ ನಗರದ ಜನಪ್ರಿಯ ಆಸ್ಪತ್ರೆ (Janapriya Hospital) ಮಾಲೀಕ ಡಾ.ಅಬ್ದುಲ್ ಬಶೀರ (Dr.Abdul Basheer) ವಿರುದ್ಧ ಹಾಸನದ (Hassan) ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ನಾಗಜ್ಯೋತಿ ಅವರ ಪೀಠದಲ್ಲಿ (Smt. Nagajyothi M.L, Prl. Civil Judge & JMFC, Hassan) ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ವಿಶೇಷ ಎಂದರೆ ಹಾಸನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆನಂದ್ ಅವರ ಆದೇಶದ ಮೇರೆಗೆ ಹಾಸನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯವರೇ ಈ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಈ ಮೂಲಕ ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ.
ಚಿತ್ರ: ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ನಾಗಜ್ಯೋತಿ ಅವರು
ಈ ಕ್ರಿಮಿನಲ್ ಮೊಕದ್ದಮೆಯಲ್ಲಿ ಮೊಹಮ್ಮದ್ ಗೌಸ್, ಡಾ.ಅಬ್ದುಲ್ ಬಶೀರ, ಮುಷ್ತಾಕ್ ಮತ್ತು ಹಿಮ್ಸ್ ಆಸ್ಪತ್ರೆ ಡಾ.ನಾಗರಾಜ್.ಕೆ. ಕ್ರಮವಾಗಿ ಮೊದಲನೇ, 2ನೇ, 3ನೇ ಮತ್ತು 4ನೇ ಆರೋಪಿಗಳಾಗಿದ್ದಾರೆ.
ಈ ನಾಲ್ವರೂ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಧೀಶೆ ನಾಗಜ್ಯೋತಿ ಅವರು ಆದೇಶಿಸಿದ್ದಾರೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಅಪಘಾತವಾಗಿದೆ (Accident) ಎಂದು ಸುಳ್ಳು ಹೇಳಿ ವಿಮಾ ಕಂಪನಿಯಿಂದ ವಿಮಾ ಹಣವನ್ನು (Insurance) ಕಬಳಿಸುವ ಸಲುವಾಗಿ ನ್ಯಾಯಾಲಯಕ್ಕೇ (the Court) ಸುಳ್ಳು ದಾಖಲೆ, ಸುಳ್ಳು ಪ್ರಮಾಣಪತ್ರ ಮತ್ತು ಸುಳ್ಳು ಸಾಕ್ಷ್ಯಗಳನ್ನು ಸಲ್ಲಿಸಿದ ಹಾಸನ (Hassan) ನಗರದಲ್ಲಿರುವ ಜನಪ್ರಿಯ (Janapriya Hospital) ಆಸ್ಪತ್ರೆಯ ಮಾಲೀಕ ಡಾ.ಅಬ್ದುಲ್ ಬಶೀರ್ (Dr.Abdul Basheer) ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆನಂದ್ ಅವರು ಮಹತ್ವದ ಆದೇಶ ನೀಡಿದ್ದರು.

ಚಿತ್ರ: ಹಾಸನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆನಂದ್ ಅವರು (Sri. Anand, III Addl. District & Sessions Judge, Hassan)
ಅಪರಾಧ ಪ್ರಕ್ರಿಯೆಯ ಸಂಹಿತೆ (CrPC) ಸೆಕ್ಷನ್ 340ರಡಿಯಲ್ಲಿ ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ ಐಪಿಸಿ (IPC Sections) ಕಲಂಗಳಾದ 191 (ಸುಳ್ಳು ಸಾಕ್ಷ್ಯ ನೀಡುವುದು), 193 (ಸುಳ್ಳು ಸಾಕ್ಷ್ಯಗಳನ್ನು ತಿರುಚುವುದು), 195 (ನ್ಯಾಯಾಲಯಕ್ಕೆ ನಿಂದನೆ), 196 (ಸುಳ್ಳು ಸಾಕ್ಷ್ಯಗಳೆಂದು ಗೊತ್ತಿದ್ದರೂ ಬಳಸುವುದು), 199 (ಸಾಕ್ಷ್ಯವಾಗಿ ಪರಿಗಣಿಸಬಹುದಾದ ಸುಳ್ಳು ಪ್ರಮಾಣಪತ್ರ ಸಲ್ಲಿಸುವುದು), 200 (ಸುಳ್ಳು ಪ್ರಮಾಣಪತ್ರವನ್ನೇ ಸತ್ಯ ಎಂದು ಸಲ್ಲಿಸುವುದು) ಈ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆಯೂ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣಗಳ ಸಂಜ್ಞೆಯನ್ನು ಪರಿಗಣಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು.

ಚಿತ್ರ: ಸೈಯದ್ ನದೀಂ ಪರ ಹಾಸನದ ನ್ಯಾಯಾಲಯದಲ್ಲಿ ವಾದಿಸಿದ್ದ ಹಿರಿಯ ವಕೀಲ ಮೊಹಮ್ಮದ್ ಇಮ್ರಾನ್ ಅಹ್ಮದ್
ಜೆಎಂಎಫ್ಸಿ (JMFC Court) ನ್ಯಾಯಾಲಯ ನಡೆಸುವ ಈ ಪ್ರಕರಣದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಸ್ತಕ್ಷೇಪ ಮಾಡಲ್ಲ ಎಂದೂ ನ್ಯಾಯಾಧೀಶ ಆನಂದ್ ಅವರು ಆದೇಶಿಸಿದ್ದರು.
ಮೊಹಮ್ಮದ್ ಗೌಸ್ ಎಂಬಾತನ ಕಾಲಿಗೆ ಸೈಯದ್ ನದೀಂ ಎಂಬಾತನ ಬೈಕ್ ಡಿಕ್ಕಿ ಆಗಿ ಆಕ್ಸಿಡೆಂಟ್ನಿಂದ ಗಂಭೀರ ಗಾಯವಾಗಿದ್ದು, ಶಾಶ್ವತ ಅಂಗವೈಕಲ್ಯ ಆಗಿದೆ ಎಂದು ಹೇಳಿ 10 ಲಕ್ಷ ರೂಪಾಯಿ ಅಪಘಾತ ಪರಿಹಾರ ವಿಮೆ ಕೋರಿ ಹಾಸನದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಹಾಸನದ ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಗೌಸ್ ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಪ್ರಕರಣದ ಮರು ವಿಚಾರಣೆ ನಡೆಸುವಂತೆ ಸೂಚಿಸಿ ಹೈಕೋರ್ಟ್ ಪ್ರಕರಣವನ್ನು ಹಾಸನ ನ್ಯಾಯಾಲಯಕ್ಕೆ ವಾಪಸ್ಕಳುಹಿಸಿತ್ತು.

ಚಿತ್ರ: ಸೈಯದ್ ನದೀಂ ಪರ ಕರ್ನಾಟಕ ಹೈಕೋರ್ಟ್ನಲ್ಲಿ ವಾದಿಸಿದ್ದ ಹೈಕೋರ್ಟ್ ವಕೀಲ ಅಭಿಷೇಕ್ M.R.
ಮರು ವಿಚಾರಣೆಯ ನಡೆಸಿದ್ದ ಹಾಸನದ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆನಂದ್ ಅವರು ನ್ಯಾಯಾಲಯಕ್ಕೆ ಸುಳ್ಳು ದಾಖಲೆ, ಸುಳ್ಳು ಸಾಕ್ಷ್ಯ ಸಲ್ಲಿಸಿದ ಹಿನ್ನೆಲೆಯಲ್ಲಿ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್ ಬಶೀರ ಮತ್ತು ಇತರರ ವಿರುದ್ಧ ಎಫ್ಐಆರ್ಗೆ ಆದೇಶಿಸಿದ್ದರು.


