ರೋಗಿಯೊಬ್ಬರಿಗೆ ವಂಚಿಸಿದ್ದರ ಸಂಬಂಧ ಹಾಸನ ನಗರದಲ್ಲಿರುವ ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ.ಅಬ್ದುಲ್ ಬಶೀರ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ B ರಿಪೋರ್ಟ್ (ಕ್ಲೀನ್ಚಿಟ್ ವರದಿ)ಯನ್ನು ಹಾಸನ ನ್ಯಾಯಾಲಯ ವಜಾಗೊಳಿಸಿದಲ್ಲದೇ, ಮತ್ತಷ್ಟು ತನಿಖೆಗೆ ಆದೇಶಿಸಿದೆ.
ಅಲ್ಲದೇ B ರಿಪೋರ್ಟ್ ಸಲ್ಲಿಸಿದ್ದ ಹಾಸನ ಪೊಲೀಸರಿಗೂ ಛೀಮಾರಿ ಹಾಕಿದೆ. ಹಾಸನದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಪೃಕೃತಿ Y.R. ಅವರು ಈ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ..?
ಹಾಸನ ಜಿಲ್ಲೆಯ ಆಲೂರು ಪಟ್ಟಣದ ಅನ್ವರ್ ಪಾಷಾ ಅವರಿಗೆ 2010ರ ಜುಲೈ 29ರಂದು ಅಪಘಾತವಾಗಿತ್ತು. ಅವರಿಗೆ ಮೊದಲನೇ ಆರೋಪಿಯಾಗಿರುವ ಮಂಗಳಾ ಆಸ್ಪತ್ರೆಯಲ್ಲಿ 2ನೇ ಆರೋಪಿಯಾಗಿರುವ ಡಾ.ಅಬ್ದುಲ್ ಬಶೀರ್ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ವೇಳೆ ಕೆ-ವೈರ್ ಅಳವಡಿಸಿದ್ದಾಗಿ ಹೇಳಿ 20 ಸಾವಿರ ರೂಪಾಯಿ ಶುಲ್ಕವನ್ನೂ ವಸೂಲಿ ಮಾಡಲಾಗಿತ್ತು. ಆದರೆ ಬಳಿಕ ನಡೆಸಲಾಗಿದ್ದ ಎಕ್ಸ್ರೇ ಕೆ-ವೈರ್ ಅಳವಡಿಸಿಲ್ಲ ಎನ್ನುವುದು ಸಾಬೀತಾಗಿತ್ತು.
ತಮಗಾದ ವಂಚನೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಅನ್ವರ್ ಪಾಷಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆ ಪ್ರಕರಣ ದಾಖಲಿಸಿದ್ದ ಹಾಸನದ ಕೆ.ಆರ್.ಪುರಂನಲ್ಲಿರುವ ಹಾಸನ ಬಡಾವಣೆ ಠಾಣೆ ಪೊಲೀಸರು ಡಾ.ಅಬ್ದುಲ್ ಬಶೀರ್ರನ್ನು ಆರೋಪಮುಕ್ತಗೊಳಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆ ಬಿ ರಿಪೋರ್ಟ್ನ್ನು ಸ್ವೀಕರಿಸದಂತೆ ಅನ್ವರ್ ಪಾಷಾ ಅವರು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಆ ಪ್ರತಿಭಟನಾ ಅರ್ಜಿಯನ್ನು ಹಾಸನದ ನ್ಯಾಯಾಲಯ ಮಾನ್ಯ ಮಾಡಿದೆ.
ಡಾ.ಅಬ್ದುಲ್ ಬಶೀರ್ ವಿರುದ್ಧ 420 ಕೇಸ್ ಸೂಕ್ತ:
ಡಾ.ಅಬ್ದುಲ್ ಬಶೀರ್ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಅಪ್ರಾಮಾಣಿಕತೆ ಮತ್ತು ಹಣ ಸುಲಿಗೆಯ ಸ್ವರೂಪದ್ದಾಗಿರುವ ಕಾರಣ ಇದು ಭಾರತೀಯ ದಂಡ ಸಂಹಿತೆಯ ಅಡಿ ಕಲಂ ೪೨೦ರಡಿ ಪ್ರಕರಣ ದಾಖಲಿಸಲು ಸೂಕ್ತ ಪ್ರಕರಣವಾಗಿ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಪೊಲೀಸರ ತನಿಖೆಯಲ್ಲೇ ಲೋಪ:
ಡಾ.ಅಬ್ದುಲ್ ಬಶೀರ್ ಪರವಾಗಿ ಬಿ ರಿಪೋರ್ಟ್ ಸಲ್ಲಿಸಿರುವ ಹಾಸನ ಪೊಲೀಸರು ತನಿಖೆಯಲ್ಲೇ ಲೋಪ ಎಸಗಿದ್ದಾರೆ ಎಂದು ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ.
ಮಂಗಳ ಆಸ್ಪತ್ರೆಯ ಡಾ.ಅಶೋಕ್ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲ. ಕೆ-ವೈರ್ ಅಳವಡಿಕೆ ಮತ್ತು ಅದನ್ನು ತೆಗೆಯುವುದರ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆದಿಲ್ಲ. ಅನ್ವರ್ ಪಾಷಾಗೆ ನೀಡಲಾದ ರಶೀದಿಯಲ್ಲಿರುವ ಆಸ್ಪತ್ರೆಯ ಸೀಲ್ ಬಗ್ಗೆ ಸರಿಯಾದ ತನಿಖೆಯನ್ನು ನಡೆಸಿಲ್ಲ. ವೈದ್ಯಕೀಯ ದಾಖಲೆಗಳನ್ನು ತಿರುಚಿದ್ದರ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲ.

ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಪೃಕೃತಿ Y.R.
ವೈದ್ಯಕೀಯ ದಾಖಲೆಗಳು, ರಶೀದಿ ದಾಖಲೆಗಳು ಮತ್ತು ಕೆ-ವೈರ್ ಬಗ್ಗೆ ನಡೆಸಲಾದ ಎಕ್ಸ್ರೇಯಲ್ಲಿ ಕಂಡುಬಂದಿರುವ ಅಂಶಗಳ ಹಿನ್ನೆಲೆಯಲ್ಲಿ ವಿಚಾರಣೆಯ ಅನಿವಾರ್ಯತೆಯಿದ್ದು, ಸಾಕ್ಷ್ಯಗಳನ್ನು ದಾಖಲಿಸದೇ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಪೊಲೀಸರು ಕೈಗೊಂಡಿರುವ ತನಿಖೆ ಅಪೂರ್ಣವಾಗಿದ್ದು, ಈ ಹಂತದಲ್ಲಿ ಬಿ ರಿಪೋರ್ಟ್ನ್ನು ಒಪ್ಪಿಕೊಳ್ಳುವುದು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ದೂರುದಾರರಿಗೆ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು B ರಿಪೋರ್ಟ್ನ್ನು ಸ್ವೀಕರಿಸುತ್ತಿಲ್ಲ ಮತ್ತು ಮತ್ತಷ್ಟು ತನಿಖೆಗೆ ಆದೇಶಿಸುತ್ತಿದೆ ಎಂದು ನ್ಯಾಯಾಧೀಶೆ ಪ್ರಕೃತಿ ಅವರು ಆದೇಶಿಸಿದ್ದಾರೆ.


