ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಿಂದ ಪರಿಹಾರ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನಗಳನ್ನು ಪಡೆದ ಸಂಬಂಧ ಜಾರಿ ನಿರ್ದೇಶನಾಲಯದ (ED) ತನಿಖೆಯಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿ ಈಗಷ್ಟೇ ನಿಟ್ಟುಸಿರು ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಲ್ಲಿ ನಡೆದಿರುವ ಅತೀ ದೊಡ್ಡ ಭೂ ಹಗರಣವೊಂದು ಸುತ್ತಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಮತ್ತೆ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ಅಂದಹಾಗೆ ಮೈಸೂರು ನಗರದಲ್ಲಿ (Mysuru) ನಡೆದಿರುವ ಈ ಅತೀ ದೊಡ್ಡ ಭೂ ಹಗರಣ ನಡೆದಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದಾಗ (DCM), ಮೊದಲ ಬಾರಿಗೆ (Chief Minister) ಮತ್ತು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ. ಈ ಹಗರಣದ ವೇಳೆ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರೂ (MLA) ಆಗಿದ್ದರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಟ್ಟಿಹಾಕಲೇಬೇಕೆಂಬ ಪಣ ತೊಟ್ಟಿರುವ BJP-JDS ಕೈಗೆ ಅತೀ ದೊಡ್ಡ ಭೂ ಹಗರಣದ ಈ ಸುದ್ದಿ ಹೊಸ ಪ್ರಬಲ ಅಸ್ತ್ರವಾಗಿ ಬದಲಾಗುವ ಸಾಧ್ಯತೆ ಇದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಮೈಸೂರು ನಗರದ ಹೃದಯಭಾಗದಲ್ಲೇ ನಡೆದಿರುವ ಈ ಭೂ ಹಗರಣದ ಸ್ಫೋಟಕ ಮಹತ್ವದ ದಾಖಲೆಗಳು ಪ್ರತಿಕ್ಷಣಕ್ಕೆ ಲಭ್ಯವಾಗಿವೆ. ಈ ದಾಖಲೆಗಳನ್ನು ಆಧರಿಸಿ ಪ್ರತಿಕ್ಷಣ ಸರಣಿ ರೂಪದಲ್ಲಿ ತನ್ನ ತನಿಖಾ ವರದಿಯನ್ನು ಪ್ರಕಟಿಸಲಿದೆ. ಆ ಸರಣಿ ತನಿಖಾ ವರದಿಯ ಮೊದಲನೇ ಭಾಗವನ್ನು ಇವತ್ತು ಪ್ರಕಟಿಸುತ್ತಿದ್ದೇವೆ.
CA ಸೈಟ್ ಹಗರಣದ ಆರಂಭ:
ಶೈಕ್ಷಣಿಕ ಉದ್ದೇಶಕ್ಕಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿಯ ಸಾಧನಾಪುರದಲ್ಲಿ ವಿಳಾಸ ಹೊಂದಿರುವ ವಿಶ್ವಶಾಂತಿ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ಶೈಕ್ಷಣಿಕ ಉದ್ದೇಶಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ವಿಶ್ವಶಾಂತಿ ಸಂಸ್ಥೆಗೆ ಮೈಸೂರು ನಗರದ ಹೃದಯಭಾಗ ಎಂದೇ ಕರೆಯಬಹುದಾದ ಸರಸ್ವತಿಪುರಂನ ತೊಣಚಿಕೊಪ್ಪಲು ಬಡಾವಣೆಯಲ್ಲಿ P/8D ಸಂಖ್ಯೆಯ ನಾಗರಿಕ ನಿವೇಶವನ್ನು ಮಾರ್ಚ್ 3, 1978ರಂದು ಮಂಜೂರು ಮಾಡಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ವಿಶ್ವಶಾಂತಿ(ರಿ)ಗೆ ಮಂಜೂರು ಮಾಡಿದ್ದ ಈ ನಾಗರಿಕ ನಿವೇಶನದ ಒಟ್ಟು ವಿಸ್ತೀರ್ಣ ಬರೋಬ್ಬರೀ 56,620 ಚದರ ಅಡಿಗಳು, ಅಂದರೆ ಬರೋಬ್ಬರೀ 1 ಎಕರೆ 38 ಸೆಂಟ್ಸ್ನಷ್ಟು ವೀಸ್ತೀರ್ಣದ ನಾಗರಿಕ ನಿವೇಶವನ್ನು ವಿಶ್ವಶಾಂತಿ (ರಿ)ಗೆ ಮಂಜೂರು ಮಾಡಲಾಯಿತು.
30 ವರ್ಷಗಳ ಗುತ್ತಿಗೆ ಷರತ್ತಿನ ಅಡಿಯಲ್ಲಿ ಈ ನಿವೇಶನ ಮಂಜೂರಾದ ಬರೋಬ್ಬರೀ 4 ವರ್ಷಗಳ ಬಳಿಕ ಮಾರ್ಚ್ 5, 1982ರಲ್ಲಿ ಗುತ್ತಿಗೆ ಕರಾರು ಪತ್ರವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಮತ್ತು ವಿಶ್ವಶಾಂತಿ (ರಿ) ಮಾಡಿಕೊಳ್ಳುತ್ತದೆ. ಈ ಗುತ್ತಿಗೆ ಕರಾರು ಪತ್ರ ಮಾಡಿಕೊಂಡ 2 ವರ್ಷದ ಬಳಿಕ ಜನವರಿ 23, 1984ರಲ್ಲಿ ಈ ಭೂಮಿಯನ್ನು ವಿಶ್ವಶಾಂತಿ (ರಿ)ಗೆ MUDA ಹಸ್ತಾಂತರ ಮಾಡಿತ್ತು.
ಶೈಕ್ಷಣಿಕ ಉದ್ದೇಶಕ್ಕಾಗಿ ಮುಡಾದಿಂದ ಬರೋಬ್ಬರೀ 56,620 ಚದರ ಅಡಿ ವೀಸ್ತೀರ್ಣದ ನಾಗರಿಕ ನಿವೇಶನದಲ್ಲಿ ಸಿಗ್ಮಾ (Sigma Hospital) ಎಂಬ ಹೆಸರಿನ ಅತೀ ದೊಡ್ಡ ಖಾಸಗಿ ಆಸ್ಪತ್ರೆಯನ್ನು ನಿರ್ಮಿಸುವ ಮೂಲಕ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ.
ಈ ಮೂಲಕ ನಾಗರಿಕ ನಿವೇಶನಗಳನ್ನು (CA Sites) ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರವೇ ಜಾರಿಗೆ ತಂದಿರುವ ಹಲವು ನಿಯಮಗಳನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.


