762 ಕೋಟಿ ರೂಪಾಯಿ ಮೊತ್ತದ ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿಯ ಟೆಂಡರ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ಹಿರಿಯ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿರುವ ಮಹತ್ವದ ದಾಖಲೆಗಳು ಪ್ರತಿಕ್ಷಣಕ್ಕೆ ಲಭ್ಯವಾಗಿದ್ದು, ಈ ಸರಣಿಯಲ್ಲಿ ಪ್ರತಿಕ್ಷಣ ತನ್ನ 4ನೇ ತನಿಖಾ ವರದಿಯನ್ನು ಪ್ರಕಟಿಸುತ್ತಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL)ನ ಕಾರ್ಯನಿರ್ವಾಹಕ ಇಂಜಿನಿಯರ್ (EE), ಕೆಆರ್ಡಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕರ (MD) ವಿರುದ್ಧ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ಟೆಂಡರ್ ಕನ್ಸಲ್ಟೆನ್ಸಿ ಸಂಸ್ಥೆ ಐಡೆಕ್ (Ideck) ವಿರುದ್ಧವೂ ವಿಚಾರಣೆಗೆ (Enquiry) ಆದೇಶಿಸಲಾಗಿದೆ.
ಅಲ್ಲದೇ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಗೂ ಕಾರಣ ಕೇಳಿ ನೋಟಿಸ್ (Show Cause Notice) ನೀಡುವಂತೆ ಸೂಚಿಸಲಾಗಿದೆ. ಮಂಡಳಿಯ ಸಭೆಯಲ್ಲಿ ಒಂದೂ ಅಂಶವನ್ನೂ ಉಲ್ಲೇಖ ಮಾಡದೇ, ಆದರೆ ಮಂಡಳಿಯ ನಿರ್ದೇಶನಗಳಿಗೆ ವಿರುದ್ಧವಾಗಿ ಜುಲೈ 28ರಂದು ಕೆಆರ್ಡಿಸಿಎಲ್ (KRDCL) ಮುಖ್ಯಸ್ಥರಿಗೆ ಪತ್ರ ಬರೆದ ಸಂಬಂಧ ಹಾಗೂ ಗುತ್ತಿಗೆದಾರ ಕಾಂತರಾಜು ಹೆಚ್.ಎಂ. (Kantharaju H.M) ಮಾಲೀಕತ್ವದ MP24ಕನ್ಸ್ಟ್ರಕ್ಷನ್ (MP24 Construction Company) ಕಂಪನಿ ಮತ್ತು ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ (Ramalingam Construction Company Ltd) ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುವುದನ್ನು ತಡೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ರಾಜ್ಯ ಡಿಬಾರ್ಮೆಂಟ್ ಸಮಿತಿಯ ಮುಖ್ಯಸ್ಥರೂ ಆಗಿರುವ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ (Amlan Aditya Biswas) ಆದೇಶ ನೀಡಿದ್ದರು.
ಈ ಕುರಿತ ಸ್ಫೋಟಕ ದಾಖಲೆಗಳು ಪ್ರತಿಕ್ಷಣಕ್ಕೆ ಲಭ್ಯವಾಗಿವೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಏನಿದು ಹಗರಣ..?
ದೇವನಹಳ್ಳಿ-ವೇಮಗಲ್-ಕೋಲಾರ ನಡುವಿನ 49.20 ಕಿಲೋ ಮೀಟರ್ ಉದ್ದದ ರಾಜ್ಯ ರಸ್ತೆ ಅಭಿವೃದ್ಧಿಗಾಗಿ ಕೆಆರ್ಡಿಸಿಎಲ್ (KRDCL Tender) ಟೆಂಡರ್ ಕರೆದಿತ್ತು. ಈ ಟೆಂಡರ್ನಲ್ಲಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡು ಹಾಸನ (Hassan) ಮೂಲದ ಗುತ್ತಿಗೆದಾರ ಕಾಂತರಾಜು ಹೆಚ್.ಎಂ. ಒಡೆತನದ MP24 ಕನ್ಸ್ಟ್ರಕ್ಷನ್ ಕಂಪನಿ ಬಿಡ್ ಸಲ್ಲಿಸಿತ್ತು.
ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಜೊತೆಗಿನ ಪಾಲುದಾರಿಕೆಯಲ್ಲಿ ಲೀಡ್ ಮೆಂಬರ್ (Lead member of Consortium) ಆಗಿದ್ದ ಹಾಸನ ಮೂಲದ MP24 ಕನ್ಸ್ಟ್ರಕ್ಷನ್ ಕಂಪನಿಯು ಆಂಧ್ರಪ್ರದೇಶ (Andra Pradesh) ರಾಜ್ಯದ ಅನಂತಪುರಂ (Ananthapuram) ಜಿಲ್ಲೆಯ ಕದಿರಿಯಲ್ಲಿ (Kadiri) 340 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ತಾನೇ ನಡೆಸಿದ್ದಾಗಿ ಬೋಗಸ್ ಮತ್ತು ನಕಲಿ, ಪೋರ್ಜರಿ ದಾಖಲೆಗಳನ್ನು ಟೆಂಡರ್ ಸಲ್ಲಿಕೆ ವೇಳೆ ಸಲ್ಲಿಸಿತ್ತು.
ಹಾಸನ ಮೂಲದ ಗುತ್ತಿಗೆದಾರ ಕಾಂತರಾಜು ಹೆಚ್.ಎಂ. (Kantharaju H.M) ಮಾಲೀಕತ್ವದ ಸಂಸ್ಥೆ ಸಲ್ಲಿಸಿದ್ದ ಬೋಗಸ್ ಮತ್ತು ನಕಲಿ, ಫೋರ್ಜರಿ ದಾಖಲೆಗಳ ಬಗ್ಗೆ ದೂರು ಸಲ್ಲಿಕೆ ಆದ ಹಿನ್ನೆಲೆಯಲ್ಲಿ ಕೆಆರ್ಡಿಸಿಎಲ್ (KRDCL) ಆಂಧ್ರಪ್ರದೇಶ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿತ್ತು.
ಹಾಸನ ಮೂಲದ ಗುತ್ತಿಗೆದಾರ ಕಾಂತರಾಜು ಹೆಚ್.ಎಂ.(Kantharaju H.M)ಗೆ ಯಾವುದೇ ಟೆಂಡರ್ನ್ನೂ ಕೊಟ್ಟಿಲ್ಲವೆಂದೂ, ಈ ಗುತ್ತಿಗೆದಾರ ತನ್ನ ಸಂಸ್ಥೆಯ ಮೂಲಕ ಸಲ್ಲಿಸಿದ್ದ ದಾಖಲೆಗಳು ಬೋಗಸ್ ಮತ್ತು ನಕಲಿ ಹಾಗೂ ಪೋರ್ಜರಿ ಎಂದೂ ಮೇ 30, 2025 ಹಾಗೂ ಜೂನ್ 4, 2025ರಂದು ಆಂಧ್ರಪ್ರದೇಶದ ಅಧಿಕಾರಿಗಳು ಎರಡು ಪ್ರತ್ಯೇಕ ಪತ್ರವನ್ನೂ ಬರೆದಿದ್ದರು. ಅಲ್ಲದೇ ಬೋಗಸ್, ನಕಲಿ ಹಾಗೂ ಫೋರ್ಜರಿ ದಾಖಲೆ ಸಲ್ಲಿಸಿ ಭ್ರಷ್ಟಾಚಾರ ಎಸಗಿರುವ ಗುತ್ತಿಗೆದಾರ ಕಾಂತರಾಜು ಹೆಚ್.ಎಂ. (Kantharaju H.M) ವಿರುದ್ಧ ಕಠಿಣ ಕ್ರಮಗಳನ್ನೂ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಗುತ್ತಿಗೆದಾರ ಕಾಂತರಾಜು.ಹೆಚ್.ಎಂ ಸರ್ಕಾರಿ ದಾಖಲೆಗಳನ್ನೇ ಫೋರ್ಜರಿ ಮಾಡಿ ನಕಲಿ ಮತ್ತು ಬೋಗಸ್ ದಾಖಲೆಗಳನ್ನೂ ಸಲ್ಲಿಸಿದ್ದರ ಬಗ್ಗೆ ಆಂಧ್ರಪ್ರದೇಶದ ಅಧಿಕಾರಿಗಳೇ ಪತ್ರ ಬರೆದು ಅಧಿಕೃತ ಮಾಹಿತಿ ನೀಡಿದ್ದರೂ ಕಾಂತರಾಜು ಮಾಲೀಕತ್ವದ MP24ಕನ್ಸ್ಟ್ರಕ್ಷನ್ ಕಂಪನಿ ವಿರುದ್ಧ ಕೆಆರ್ಡಿಸಿಎಲ್ನ (KRDCL) ಮುಖ್ಯ ಇಂಜಿನಿಯರ್ (CE) ಆಗಲೀ ಅಥವಾ ವ್ಯವಸ್ಥಾಪಕ ನಿರ್ದೇಶಕರಾಗಲೀ (MD) ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿರಲಿಲ್ಲ.
ಗುತ್ತಿಗೆದಾರ ಕಾಂತರಾಜು ಮಾಲೀಕತ್ವದ MP24 ಕನ್ಸ್ಟ್ರಕ್ಷನ್ ಕಂಪನಿಯ ಈ ಭ್ರಷ್ಟಚಾರ ಮತ್ತು ಅಕ್ರಮದಲ್ಲಿ ಕೆಆರ್ಡಿಸಿಎಲ್ನ (KRDCL) ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಇಂಜಿನಿಯರ್ (CE) ಕೈಜೋಡಿಸಿದ್ದಾರೆ ಎಂಬ ಅನುಮಾನ ಬರುತ್ತಿದ್ದು, ಟೆಂಡರ್ನ ಪರಿಶೀಲನೆ ವೇಳೆ ಉದ್ದೇಶಪೂರ್ವಕವಾಗಿಯೇ ಸುಮ್ಮನಿದಿದ್ದು ಪ್ರಶ್ನೆಗಳನ್ನು ಹುಟ್ಟಿಸುತ್ತಿದೆ ಮತ್ತು ಕೆಆರ್ಡಿಸಿಎಲ್ನ ಎಂಡಿ (KRDCL MD), ಸಿಇ (KRDCL CE) ಮತ್ತು ಇಇ (KRDCL CE) ಅಕ್ರಮದಲ್ಲಿ ಕೈ ಜೋಡಿಸಿರುವ ಅನುಮಾನ ಮೂಡಿಸ್ತಿದೆ.
ಟೆಂಡರ್ ದಾಖಲೆಗಳ ಪರಿಶೀಲನೆ ನಡೆಸಬೇಕಿದ್ದ ಐಡೆಕ್ ಸಂಸ್ಥೆ (Ideck) ಆರಂಭದಲ್ಲಿ ಸೂಕ್ತವಾಗಿ ಪರಿಶೀಲಿಸಲು ವಿಫಲವಾಗಿದೆ.
ಕೆಆರ್ಡಿಸಿಎಲ್ನ (KRDCL) ಈ ಅಧಿಕಾರಿಗಳಾಗಲೀ ಅಥವಾ ಐಡೆಕ್ (Ideck) ಸಂಸ್ಥೆಯಾಗಲೀ ಗುತ್ತಿಗೆದಾರ ಕಾಂತರಾಜು ಹೆಚ್.ಎಂ. ಮಾಲೀಕತ್ವದ MP24 ಕನ್ಸ್ಟ್ರಕ್ಷನ್ ಕಂಪನಿ ನಡೆಸಿರುವ ಇತರೆ ಕಾಮಗಾರಿ ಅನುಭವಗಳ ದಾಖಲೆಗಳನ್ನೂ ಕೇಳಲಿಲ್ಲ
ಎಂದು ಲೋಕೋಪಯೋಗಿ ಇಲಾಖೆ (PWD) ಪ್ರಧಾನ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ನಡೆದಿದ್ದ ಡಿಬಾರ್ಮೆಂಟ್ ಸಮಿತಿ (Debarment Committee) ಕೆಆರ್ಡಿಸಿಎಲ್ನ (KRDCL) ಪ್ರಮುಖ ಅಧಿಕಾರಿಗಳು ಮತ್ತು ಐಡೆಕ್ (Ideck) ವಿರುದ್ಧ ಕಟು ಟಿಪ್ಪಣಿಯನ್ನು ಮಾಡಿದೆ.
ಗುತ್ತಿಗೆದಾರ ಕಾಂತರಾಜು (Kantharaju H.M) ಮಾಲೀಕತ್ವದ ಕಂಪನಿ ನಕಲಿ ಮತ್ತು ಬೋಗಸ್ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆಂಧ್ರಪ್ರದೇಶದ ಅಧಿಕಾರಿಗಳೇ ಪತ್ರವನ್ನು ಬರೆದ ಎರಡೂವರೆ ತಿಂಗಳ ಬಳಿಕ ಆಗಸ್ಟ್ 11, 2025ರಂದು ಕೆಆರ್ಡಿಸಿಎಲ್ (KRDCL) MP24 ಕನ್ಸ್ಟ್ರಕ್ಷನ್ ಕಂಪನಿ ಮತ್ತು ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಗೆ ನೀಡಲಾಗಿದ್ದ ಟೆಂಡರ್ನ್ನು ರದ್ದುಗೊಳಿಸಿತ್ತು.


