ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಕರ್ನಾಟಕದಲ್ಲೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ.
ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮತ್ತು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಸಂಬಂಧದ ಮಸೂದೆಗಳ ಸಂಬಂಧ ಗುರುವಾರದಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನ ಇವತ್ತು ಅಂತ್ಯವಾಗಲಿದೆ.
ಮಸೂದೆ ಸಂಬಂಧ ಲೋಕಸಭೆಯಲ್ಲಿ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಒಳಗೊಂಡು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಳವಾಗಲಿರುವ ಲೋಕಸಭಾ ಸ್ಥಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕರ್ನಾಟಕದಲ್ಲಿ ಈಗಿರುವ ಒಟ್ಟು 28 ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಿಕೆ ಆಗಲಿದೆ. ಇಲ್ಲಿಯವರೆಗೆ ಸಂಸತ್ತಿನಲ್ಲಿ ಕರ್ನಾಟಕದ ಸಂಸದರ ಶೇಕಡಾವಾರು ಪ್ರಮಾಣ 5.15ರಷ್ಟಿತ್ತು. ಕ್ಷೇತ್ರ ಮರು ವಿಂಗಡಣೆ ಬಳಿಕ ಅದು ಇಳಿಕೆಯಾಗಿ ಶೇಕಡಾ 5.14ಕ್ಕೆ ಕುಸಿಯಲಿದೆ.
ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿದ್ದು ಅವುಗಳ ಸಂಖ್ಯೆ 38ಕ್ಕೆ ಏರಿಕೆ ಆಗಲಿದೆ. ಈ ಮೂಲಕ ಆಂಧ್ರದ ಪ್ರಾತಿನಿಧ್ಯ ಲೋಕಸಭೆಯಲ್ಲಿ ಶೇಕಡಾ 4.6ರಿಂದ ಶೇಕಡಾ 4.65ಕ್ಕೆ ಏರಿಕೆಯಾಗಲಿದೆ.
ತಮಿಳುನಾಡಿನಲ್ಲಿ ಒಟ್ಟು 39 ಮಂದಿ ಸಂಸದರಿದ್ದು, ಕ್ಷೇತ್ರ ಮರು ವಿಂಗಡಣೆ ಬಳಿಕ ಲೋಕಸಭಾ ಕ್ಷೇತ್ರಗಳ ಸಂಖ್ಯೆ 59ಕ್ಕೆ ಏರಿಕೆಯಾಗಲಿದೆ. ಈ ಮೂಲಕ ಲೋಕಸಭೆಯಲ್ಲಿ ಆ ರಾಜ್ಯದ ಪ್ರಾತಿನಿಧ್ಯ ಶೇಕಡಾ 7.18ರಿಂದ ಶೇಕಡಾ 7.23ಕ್ಕೆ ತುಸು ಏರಲಿದೆ.
ಕೇರಳದಲ್ಲಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 20 ಅಂದರೆ ಲೋಕಸಭೆಯಲ್ಲಿ ರಾಜ್ಯದ ಪ್ರಾತಿನಿಧ್ಯ ಶೇಕಡಾ 3.68ರಷ್ಟಿದ್ದು, ಅದು ಈಗ 30 ಸ್ಥಾನಗಳಿಗೆ ಅಂದರೆ ಶೇಕಡಾ 3.67ಕ್ಕೆ ಕುಸಿಯಲಿದೆ.
ತೆಲಂಗಾಣದಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳು 17. ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ 26ಕ್ಕೆ ಏರಲಿದೆ. ಅಂದರೆ ಲೋಕಸಭೆಯಲ್ಲಿ ತೆಲಂಗಾಣದ ಪ್ರಾತಿನಿಧ್ಯ ಶೇಕಡಾ 3.13ರಿಂದ ಶೇಕಡಾ 3.18ಕ್ಕೆ ಏರಲಿದೆ.
ಸದ್ಯಕ್ಕೆ 54 ಸದಸ್ಯ ಬಲದ ಲೋಕಸಭೆಯಲ್ಲಿ ದಕ್ಷಿಣದ ಐದು ರಾಜ್ಯಗಳು ಪ್ರತಿನಿಧಿಸ್ತಿರುವ ಸಂಸದ ಸಂಖ್ಯೆ 129 ಅಂದರೆ ಲೋಕಸಭೆಯ ಒಟ್ಟು ಸಂಸದರ ಪೈಕಿ ಶೇಕಡಾ 23.75. ಕ್ಷೇತ್ರ ಮರು ವಿಂಗಡಣೆ ಬಳಿಕ ಸಂಸದರ ಸಂಖ್ಯೆ 195ಕ್ಕೆ ಅಂದರೆ ಶೇಕಡಾ 23.9ರಷ್ಟು ಅಲ್ಪ ಏರಿಕೆ ಆಗಲಿದೆ.


