ಕರ್ನಾಟಕ ಪೊಲೀಸ್ ಇಲಾಖೆ ಮುಖ್ಯಸ್ಥರಾಗಿರುವ ಡಾ.ಎಂ.ಎ.ಸಲೀಂ ಅವರ ಕಾರ್ಯಾವಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷದ (2027ರ ಆಗಸ್ಟ್ 29) ಆಗಸ್ಟ್ 29ರವರೆಗೂ ವಿಸ್ತರಿಸಿದೆ.
ಇದೇ ವರ್ಷದ ಜೂನ್ನಲ್ಲಿ 25ರಂದು ಸಲೀಂ ಅವರು ನಿವೃತ್ತರಾಗಬೇಕಿತ್ತು. ಆದರೆ ಈಗ ರಾಜ್ಯ ಸರ್ಕಾರ ಕಾರ್ಯಾವಧಿ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ 14 ತಿಂಗಳು ಹೆಚ್ಚುವರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಲೀಂ ಅವರಿಗೆ ಸಿಕ್ಕಿದೆ.
2006ರಲ್ಲಿ ಪ್ರಕಾಶ್ ಸಿಂಗ್ ಮತ್ತು ಭಾರತ ಸರ್ಕಾರ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಡಾ.ಸಲೀಂ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದೆ. ಸುಪ್ರೀಂಕೋರ್ಟ್ನ ಆ ತೀರ್ಪಿನ ಪ್ರಕಾರ ಪೊಲೀಸ್ ಮಹಾನಿರ್ದೇಶಕರು ಕನಿಷ್ಠ ಎರಡು ವರ್ಷ ಸೇವಾವಧಿಯಲ್ಲಿರಬೇಕು.
ಕಳೆದ ವರ್ಷ ಅಂದರೆ 25ರ ಮೇ 21ರಂದು ಸಲೀಂ ಅವರನ್ನು ಪ್ರಭಾರ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಬಳಿಕ ಅದೇ ವರ್ಷದ ಆಗಸ್ಟ್ನಲ್ಲಿ ಅವರನ್ನು ಖಾಯಂಗೊಳಿಸಲಾಗಿತ್ತು. ಈ ಮೂಲಕ 2 ವರ್ಷ 2 ತಿಂಗಳು ಸಲೀಂ ಅವರು ಡಿಜಿಪಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಮೂಲತಃ ಕನ್ನಡಿಗರೇ ಆಗಿರುವ ಸಲೀಂ ಅವರು ಬೆಂಗಳೂರಿನ ಚಿಕ್ಕಬಾಣಾವರದವರು.
ಸಲೀಂ ಅವರ ಸೇವಾಧಿಯನ್ನು 14 ತಿಂಗಳು ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಸಲೀಂ ನಿವೃತ್ತಿ ಬಳಿಕ ಸೇವಾ ಹಿರಿತನದ ಕಾರಣಕ್ಕಾಗಿ ಡಿಜಿಪಿ ಆಗುವ ನಿರೀಕ್ಷೆಯಲ್ಲಿದ್ದ ಪ್ರಶಾಂತ್ ಸಿಂಗ್ ಠಾಕೂರ್ಗೆ ಹಿನ್ನಡೆಯಾಗಿದೆ. ಮುಂದಿನ ವರ್ಷದ ಮೇಗೆ ಠಾಕೂರ್ ನಿವೃತ್ತರಾಗಲಿದ್ದಾರೆ.
ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಮುಸಲ್ಮಾನ ಸಮುದಾಯ ಅಸಮಾಧಾನಗೊಂಡಿರುವ ಹೊತ್ತಲ್ಲಿ ಡಿಜಿಪಿ ಸಲೀಂ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಿರುವುದು ಮಹತ್ವ ಪಡೆದುಕೊಂಡಿದೆ.


