ಪ್ರತಿಕ್ಷಣ Exclusive Part -2: KRDCL ಟೆಂಡರ್‌ ಅಕ್ರಮ – ರಾಮಲಿಂಗಂ ಕಂಪನಿಗೆ 2 ವರ್ಷ ನಿಷೇಧ

ದೇಶದ ಪ್ರಮುಖ ನಿರ್ಮಾಣ ಕಂಪನಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಪ್ರೈವೇಟ್‌ ಲಿಮಿಟೆಡ್‌ಗೆ Ramalingam Construction Company Private Limited (RCCL) ಕರ್ನಾಟಕದಲ್ಲಿ 2 ವರ್ಷಗಳವರೆಗೆ ನಿಷೇಧ ಹೇರಲಾಗಿದೆ.

2 ವರ್ಷ ಕಪ್ಪು ಪಟ್ಟಿಗೆ ಸೇರಿಸಿ ಹೊರಡಿಸಿರುವ ಅದೇಶದ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.

ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆ ನಡೆಸುವ ಯಾವುದೇ ಕಾಮಗಾರಿಗಳ ಟೆಂಡರ್‌ನಲ್ಲೂ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಭಾಗವಹಿಸದಂತೆ ನಿಷೇಧ ಹೇರಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ನೇತೃತ್ವ ರಾಜ್ಯ ಡಿಬಾರ್‌ಮೆಂಟ್‌ ಸಮಿತಿ ನೀಡಿದ್ದ ಆದೇಶವನ್ನು ಆಧರಿಸಿ 2 ವರ್ಷ ಕಪ್ಪು ಪಟ್ಟಿಗೆ ಸೇರಿಸಿ ಲೋಕೋಪಯೋಗಿ ಇಲಾಖೆ ಆಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಆದೇಶ ಹೊರಡಿಸಿದ್ದಾರೆ.

ತಮಿಳುನಾಡಿನ ಈರೋಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ಬೆಂಗಳೂರಿನ ರಂಗನಾಥ ಕಾಲೋನಿಯಲ್ಲಿ ಪ್ರಾದೇಶಿಕ ಕಚೇರಿಯನ್ನು ಹೊಂದಿದೆ.

ಪ್ರತಿಕ್ಷಣ Exclusive Part -1: KRDCL ಟೆಂಡರ್‌ ಅಕ್ರಮ – ಕಂಪನಿಗೆ 3 ವರ್ಷ ನಿಷೇಧ

ಆರೋಪ ಏನು..?

ದೇವನಹಳ್ಳಿ-ವೇಮಗಲ್‌-ಕೋಲಾರ ನಡುವಿನ 49.64 ಕಿಲೋ ರಾಜ್ಯ ಹೆದ್ದಾರಿ-96ಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್‌ ವೇಳೆ ಹಾಸನ ಮೂಲದ ಬೆಂಗಳೂರಲ್ಲೂ ಕಚೇರಿಯನ್ನು ಹೊಂದಿರುವ MP24 ಕನ್‌ಸ್ಟ್ರಕ್ಷನ್‌ ಕಂಪನಿಯು ಸುಳ್ಳು, ನಕಲಿ ದಾಖಲೆಗಳನ್ನು ಸಲ್ಲಿಸಿತ್ತು ವಂಚನೆಯನ್ನು ಎಸಗಿತ್ತು.

ರಾಜ್ಯ ಹೆದ್ದಾರಿ -96ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸಲುವಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇದೇ ವರ್ಷದ ಫೆಬ್ರವರಿ 25ರಂದು ಟೆಂಡರ್‌ನ್ನು ಆಹ್ವಾನಿಸಿತ್ತು. ಈ ವೇಳೆ ನಾಲ್ಕು ಕಂಪನಿಗಳು ಯಶಸ್ವಿಯಾಗಿ ಬಿಡ್ಡಿಂಗ್‌ನ್ನು ಮಾಡಿದ್ವು. ಅವುಗಳ ಪೈಕಿ MP24 ಕನ್‌ಸ್ಟ್ರಕ್ಷನ್‌ ಕಂಪನಿ ಮತ್ತು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಪ್ರೈವೇಟ್‌ ಲಿಮಿಟೆಡ್‌ ಈ ಎರಡೂ ಸಂಸ್ಥೆಗಳು ಜೊತೆಯಾಗಿ ಪಾಲುದಾರಿಕೆಯಲ್ಲಿ ಬಿಡ್ಡಿಂಗ್‌ ಮಾಡಿದ್ದವು.

ಮೇ 16ರಂದು ಹಣಕಾಸು ಬಿಡ್ಡಿಂಗ್‌ ಶುರುವಾದ ಬಳಿಕ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಮೇ 19ರಂದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ MP24 ಕನ್‌ಸ್ಟ್ರಕ್ಷನ್‌ ಕಂಪನಿಯು ಸುಳ್ಳು ದಾಖಲೆಗಳನ್ನು ಸಲ್ಲಿಸಿದೆ ಎಂದು ಆರೋಪಿಸಿ ಪತ್ರವನ್ನು ಬರೆದಿತ್ತು.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿಯಲ್ಲಿ HNSS ಮುಖ್ಯ ಕಾಲುವೆಯ 45.6 ಕಿಲೋ ಮೀಟರ್‌ನಿಂದ 110 ಕಿಲೋ ಮೀಟರ್‌ವರೆಗಿನ P9ಯಿಂದ ಹಿಡಿದು P13ರವರೆಗೆ ಕಾಮಗಾರಿಯನ್ನು ತಾನೇ ನಡೆಸಿದ್ದಾಗಿ MP24 ಕನ್‌ಸ್ಟ್ರಕ್ಷನ್‌ ಕಂಪನಿಯು ದಾಖಲೆಯನ್ನು ಸಲ್ಲಿಸಿತ್ತು.

ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈವೇಟ್‌ ಲಿಮಿಟೆಡ್‌ ದೂರಿನ ಬಳಿಕ KRDCL ಈ ಬಗ್ಗೆ ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್‌ ಅವರಿಂದ ಮಾಹಿತಿಯನ್ನು ಪಡೆಯಿತು.

ಆ ಮಾಹಿತಿಯ ಪ್ರಕಾರ ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆಯು MP24 ಕನ್‌ಸ್ಟ್ರಕ್ಷನ್‌ ಕಂಪನಿಗೆ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಕೊಟ್ಟಿಲ್ಲವೆಂದೂ, MP24 ಕನ್‌ಸ್ಟ್ರಕ್ಷನ್‌ ಕಂಪನಿಯು ಕೆಆರ್‌ಡಿಸಿಎಲ್‌ಗೆ ಸಲ್ಲಿಸಿದ್ದ ದಾಖಲೆಗಳೆಲ್ಲವೂ ಬೋಗಸ್‌ ಮತ್ತು ನಕಲಿ ಎಂದು ಸ್ಪಷ್ಟಪಡಿಸಿತ್ತು.

ಇದಲ್ಲದೇ ಮದನಪಲ್ಲಿಯ ಸೂಪರಿಟೆಂಡಿಂಗ್‌ ಇಂಜಿನಿಯರ್‌ ಕೂಡಾ ಕೆಆರ್‌ಡಿಸಿಎಲ್‌ಗೆ ಪತ್ರ ಬರೆದು MP24 ಕನ್‌ಸ್ಟ್ರಕ್ಷನ್‌ ಕಂಪನಿಗೆ ಯಾವುದೇ ಕಾಮಗಾರಿಗಳ ಗುತ್ತಿಗೆಯನ್ನು ನೀಡಿಲ್ಲವೆಂದೂ, ಯಾವುದೇ ಪ್ರಮಾಣಪತ್ರವನ್ನೂ ಕೊಟ್ಟಿಲ್ಲವೆಂದೂ, ಆ ಕಂಪನಿ ಅಪ್‌ಲೋಡ್‌ ಮಾಡಿರುವ ಪ್ರಮಾಣಪತ್ರಗಳು ನಕಲಿ ಎಂದೂ ಸ್ಪಷ್ಟಪಡಿಸಿದ್ದರು. ಅಲ್ಲದೇ MP24 ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೆಆರ್‌ಡಿಸಿಎಲ್‌ ಮುಖ್ಯ ಇಂಜಿನಿಯರ್‌ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು.

1) MP24 ಕನ್‌ಸ್ಟ್ರಕ್ಷನ್‌ ಕಂಪನಿಯು ಫೋರ್ಜರಿ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಭ್ರಷ್ಟಾಚಾರ ಮತ್ತು ವಂಚನೆಗೆ ಯತ್ನಿಸಿರುವುದು ಆಂಧ್ರಪ್ರದೇಶದ ಮುಖ್ಯ ಇಂಜಿನಿಯರ್‌ ಮತ್ತು ಸೂಪರಿಟೆಂಡಿಂಗ್‌ ಇಂಜಿನಿಯರ್‌ ಅವರ ಪತ್ರಗಳಿಂದ ಸ್ಪಷ್ಟವಾಗಿದೆ.

2) ಒರಿಜಿನಲ್‌ ಆಡಿಟರ್‌ ಅಲ್ಲದವರಿಂದ ಕಂಪನಿಯ ತೆರಿಗೆ ಮತ್ತು ಆದಾಯದ ಬಗ್ಗೆ ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ.

3) ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡು ಬಿಡ್ಡಿಂಗ್‌ ಸಲ್ಲಿಸಿದ ಕಾರಣ ಆ ಕಂಪನಿಯ ಜೊತೆಗಿನ ಒಪ್ಪಂದವನ್ನು ಬಳಸಿಕೊಂಡು MP24 ಕನ್‌ಸ್ಟ್ರಕ್ಷನ್‌ ಕಂಪನಿ ಅಸತ್ಯವಾದ ಕ್ರೆಡಿಂಗ್‌ ರೇಟಿಂಗ್‌ನ್ನು ಪಡೆದುಕೊಂಡು ವಂಚನೆ ಎಸಗಿರುವುದು ಕಂಡುಬಂದಿದೆ.

ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದ MP24 ಕನ್‌ಸ್ಟ್ರಕ್ಷನ್‌ ಕಂಪನಿಯು ನಕಲಿ, ಸುಳ್ಳು, ಫೋರ್ಜರಿ ದಾಖಲೆಗಳನ್ನು ಸಲ್ಲಿಸಿದೆ ಎಂದು ಇದೇ ಕಾಮಗಾರಿಗೆ ಬಿಡ್ಡಿಂಗ್‌ ಮಾಡಿದ್ದ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈವೇಟ್‌ ಲಿಮಿಟೆಡ್‌ ಸರ್ಕಾರಕ್ಕೆ ದೂರು ಸಲ್ಲಿಸಿದ 3 ದಿನಗಳ ಬಳಿಕವಷ್ಟೇ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ತಾನು MP24 ಕನ್‌ಸ್ಟ್ರಕ್ಷನ್‌ ಕಂಪನಿ ಜೊತೆಗಿನ ಬಿಡ್ಡಿಂಗ್‌ ಪಾಲುದಾರಿಕೆಯನ್ನು ವಾಪಸ್‌ ಪಡೆಯುತ್ತಿರುವುದಾಗಿ ಕೆಆರ್‌ಡಿಸಿಎಲ್‌ಗೆ ಪತ್ರ ಬರೆದಿತ್ತು. ಆದರೆ ಆ ಪತ್ರ ಕೆಆರ್‌ಡಿಸಿಎಲ್‌ಗೆ ತಲುಪಿದ್ದು ಮೇ 26ರಂದು ಅಂದರೆ ಪಾಲುದಾರಿಕೆ ಮಾಡಿಕೊಂಡಿದ್ದ ಕಂಪನಿಯ ವಿರುದ್ಧ ಆರೋಪ ಕೇಳಿಬಂದ 1 ವಾರದ ಬಳಿಕವಷ್ಟೇ.

ಈ ಆರೋಪಗಳಿಗೆ MP24 ಕನ್‌ಸ್ಟ್ರಕ್ಷನ್‌ ಕಂಪನಿ ಮತ್ತು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಕೊಟ್ಟ ಸ್ಪಷ್ಟನೆಯನ್ನು ಟೆಂಡರ್‌ ಮೌಲ್ಯಮಾಪನ ಸಮಿತಿ ಒಪ್ಪಿಕೊಳ್ಳಲಿಲ್ಲ.

1) ಕಾಮಗಾರಿ ನಡೆಸಿರುವ ಅನುಭವದ ಬಗ್ಗೆ ತಾಂತ್ರಿಕ ಪ್ರಸ್ತಾವನೆ ಸಂದರ್ಭದಲ್ಲಿ ಸುಳ್ಳು ಪ್ರಮಾಣಪತ್ರಗಳನ್ನು ತಪ್ಪಾಗಿ ಸಲ್ಲಿಸಲಾಗಿದೆ ಎನ್ನುವುದು ಸಕಾರಣವಲ್ಲ ಮತ್ತು ಆ ತಪ್ಪನ್ನು ಒಪ್ಪಿಕೊಂಡರೂ ಮನ್ನಿಸಲು ಸಾಧ್ಯವಿಲ್ಲ.

2) ಕಾನೂನುಬದ್ಧವಾಗಿ ರಚಿಸಲಾದ ಜಂಟಿ ಹೂಡಿಕೆ ಸಂಸ್ಥೆಗೆ ನೀಡಲಾದ ಜಂಟಿ ಹೂಡಿಕೆ ಒಪ್ಪಿಗೆ ಪತ್ರವನ್ನು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ತಾನು ಹಿಂಪಡೆದಿರುವುದಾಗಿ ಸಲ್ಲಿಸಿರುವ ಪತ್ರವನ್ನು ಈ ಹಂತದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಜಂಟಿ ಹೂಡಿಕೆಯ ಕಲಂ 8ರ ಪ್ರಕಾರ ಒಂದು ವೇಳೆ ಬಿಡ್ಡರ್‌ ಕಾಮಗಾರಿಗೆ ಪೂರ್ವ ಅರ್ಹತೆಯನ್ನು ಹೊಂದಿಲ್ಲದೇ ಇದ್ದರೆ ಅಥವಾ ಕಾಮಗಾರಿ ಪೂರ್ಣಗೊಳಿಸಿದ ಬಳಿಕವಷ್ಟೇ ಆ ಜಂಟಿ ಹೂಡಿಕೆ ಒಪ್ಪಂದ ಮುಕ್ತಾಯಗೊಳ್ಳುತ್ತದೆ.

3) ಈ ಎರಡೂ ಸಂಸ್ಥೆಗಳ ಬಗ್ಗೆ ದೂರುದಾರರು ಆದಾಯ ತೆರಿಗೆ ಇಲಾಖೆಯಿಂದ ಪಡೆದುಕೊಂಡು ಸಲ್ಲಿಸಿರುವ ದಾಖಲೆಗಳಲ್ಲಿ ಕೆಲವು ಸತ್ಯಾಂಶವಿದೆ ಎಂದು ಕಂಡುಬರುತ್ತಿದೆ.

ಆಗಸ್ಟ್‌ 1ರಂದು ರಾಜ್ಯ ಡಿಬಾರ್‌ಮೆಂಟ್‌ ಸಮಿತಿ ಸಭೆಗೆ ಹಾಜರಾಗಿದ್ದ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ಮೌಖಿಕ ಉತ್ತರವನ್ನು ಸಲ್ಲಿಸಿತ್ತು. ಜಂಟಿ ಹೂಡಿಕೆ ಒಪ್ಪಂದವನ್ನು ರದ್ದುಗೊಳಿಸುವ ಸಂಬಂಧ MP24 ಕನ್‌ಸ್ಟ್ರಕ್ಷನ್‌ ಕಂಪನಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ತನಗೆ ವಿನಾಯಿತಿ ನೀಡುವಂತೆ ಕೇಳಿಕೊಂಡಿತ್ತು. ಆದ್ರೆ ಈ ಪತ್ರ ವ್ಯವಹಾರಗಳೆಲ್ಲವೂ ಆ ಎರಡು ಕಂಪನಿಗಳ ನಡುವೆ ನಡೆದಿದ್ದ ಪತ್ರ ವ್ಯವಹಾರವಷ್ಟೇ ಆಗಿರುವ ಕಾರಣ ಅದನ್ನು ಸೂಕ್ತ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜೊತೆಗೆ ಇನ್ನೋರ್ವ ಬಿಡ್ಡರ್‌ನ ದೂರಿನ ಬಳಿಕವಷ್ಟೇ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಎಚ್ಚೆತ್ತುಕೊಂಡಿತ್ತು. ಫೆಬ್ರವರಿಯಲ್ಲೇ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂಬುವುದು ಸಾಕ್ಷ್ಯವಲ್ಲ, ಕಾರಣವೆಂದರೆ ಈ ಎರಡೂ ಕಂಪನಿಗಳ ನಡುವೆ ಒಪ್ಪಂದ ಆಗಿದ್ದು ಏಪ್ರಿಲ್‌ 2, ಏಪ್ರಿಲ್‌ 11, 2025ರಂದು. ತನ್ನನ್ನು ಉಳಿಸಿಕೊಳ್ಳುವ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯ ಈ ತಂತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತನ್ನ ಪಾಲುದಾರಿಕೆ ಕಂಪನಿಯ ಅಕ್ರಮಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಸಾಕಷ್ಟು ಕಾಲಾವಕಾಶ ಇತ್ತಾದರೂ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಮಾಹಿತಿ ನೀಡಲಿಲ್ಲ.

ಇನ್ನೋರ್ವ ಬಿಡ್ಡರ್‌ ದೂರು ಕೊಟ್ಟಾದ ಬಳಿಕ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ದಿಢೀರ್‌ ಎಚ್ಚೆತ್ತಕೊಂಡವರಂತೆ ಕ್ರಮಗಳಿಂದ ಬಚಾವ್‌ ಆಗಲು ಕಣ್ಣೊರೆಸುವ ತಂತ್ರವನ್ನು ಮಾಡಿದೆ. ಈ ಸಂಪೂರ್ಣ ಅಕ್ರಮ ಮತ್ತು ಫೋರ್ಜರಿಯ ಸಂಪೂರ್ಣ ಮಾಹಿತಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಗೆ ಇತ್ತು ಮತ್ತು ಅದನ್ನು ತಡೆಯುವುದಕ್ಕೆ ಅಥವಾ ವರದಿ ಮಾಡುವುದಕ್ಕೆ ಏನೂ ಮಾಡಲಿಲ್ಲ ಮತ್ತು ಹಣಕಾಸು ಬಿಡ್ಡಿಂಗ್‌ ಶುರುವಾಗುವರೆಗೂ ಜಂಟಿ ಹೂಡಿಕೆ ಒಪ್ಪಂದವನ್ನು ಮುಂದುರೆಸಿತ್ತು ಮತ್ತು ಇನ್ನೋರ್ವ ಬಿಡ್ಡರ್‌ ದೂರು ಕೊಟ್ಟ ಬಳಿಕ ತಾನು ಬಯಲಾಗುವ ಮತ್ತು ಸಿಕ್ಕಿ ಹಾಕಿಕೊಳ್ಳುವ ಭಯದಿಂದಷ್ಟೇ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ಜಂಟಿ ಹೂಡಿಕೆ ಒಪ್ಪಂದದಿಂದ ಹಿಂದೆ ಸರಿಯಿತು

ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ನೇತೃತ್ವದ ರಾಜ್ಯ ಡಿಬಾರ್‌ಮೆಂಟ್‌ ಸಮಿತಿ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ

1) MP24 ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧ ಫೋರ್ಜರಿ, ವಂಚನೆ, ಲಾಭಕ್ಕಾಗಿ ಮೋಸ ಮತ್ತು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಆರೋಪದಡಿ ಎಫ್‌ಐಆರ್‌ ದಾಖಲಿಸಬೇಕು.

2) ಪಾಲುದಾರ ಕಂಪನಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ತನ್ನ ಸಹಭಾಗಿ ಸಂಸ್ಥೆಯ ಅಕ್ರಮದ ಬಗ್ಗೆ ವರದಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧವೂ ಎಫ್‌ಐಆರ್‌ ದಾಖಲಿಸಬೇಕು.

3) ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯು ಉದ್ದೇಶಪೂರ್ವಕವಾಗಿ ಕೃತ್ಯವನ್ನು ಮುಚ್ಚಿಟ್ಟ ಕಾರಣಕ್ಕಾಗಿ ಆ ಕಂಪನಿಯನ್ನು ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಂದ 2 ವರ್ಷದ ಮಟ್ಟಿಗೆ ನಿಷೇಧಿಸಲಾಗಿದೆ.

4) ಕೆಟಿಪಿಪಿ ನಿಯಮಗಳ ಕಲಂ 26C ಅಡಿಯಲ್ಲಿ ಇತರೆ ಕ್ರಮಕೈಗೊಳ್ಳಬೇಕು

ಎಂದು ಲೋಕೋಪಯೋಗಿ ಇಲಾಖೆ ಆಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್‌ ಶಾಸಕನಿಗೆ ಮತ್ತೊಂದು ಆಘಾತ

ಕರ್ನಾಟಕ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ಗೆ (Congress MLA Satish Sail)...

Betting: ಇಬ್ಬರು ಕ್ರಿಕೆಟ್‌ ಆಟಗಾರರಿಗೆ ಶಾಕ್‌

ಇಬ್ಬರು ಕ್ರಿಕೆಟಿಗರಿಗೆ ಸೇರಿದ 11 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ...

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಲಿಂಗಾಯತ ಸಮಾಜ ಕಿಡಿ

ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಲಿಂಗಾಯತ ಸಮಾಜ ಸಿಡಿದೆದಿದ್ದೆ. ಲಿಂಗಾಯತ ಸಮಾಜದ...

BJP ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ MLA S.R. ವಿಶ್ವನಾಥ್‌ ಅಸಮಾಧಾನ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಬರುವ ಐದು...